ಸುರತ್ಕಲ್‌: ರಿಕ್ಷಾ ಚಾಲಕನಿಗೆ ಹಲ್ಲೆ, ಬೆದರಿಕೆ: ಮೂವರು ಆರೋಪಿಗಳ ಬಂಧನ

Update: 2023-02-27 17:19 GMT

ಸುರತ್ಕಲ್‌, ಫೆ.27:  ರಿಕ್ಷಾ ಚಾಲಕನಿಗೆ ತಲವಾರಿನಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ಸುರತ್ಕಲ್ ಪೊಲೀಸ್‌ ಠಾಣೆ ವ್ಯಾಪ್ತಿಯ ಚಿತ್ರಾಪುರ ಸಮೀಪ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಚಿತ್ರಾಪುರ ಪ್ರದೇಶದಲ್ಲಿ ವಾಸವಾಗಿರುವ ಅಮಲ್‌ ರಾಜ್‌, ಪ್ರತೀಕ್‌, ನಿಶಾಂತ್‌ ಎಂಬವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದ ರಿಕ್ಷಾ ಚಾಲಕ ಸುನೀಲ್‌ ಎಂಬವರ ತಲೆಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಚಿತ್ರಾಪುರ ಕಡಲ ಕಿನಾರೆಯಲ್ಲಿ ಕಡಲು ಕೊರೆತ ತಡೆಗೆ ಹಾಕಲಾಗಿದ್ದ ಕಲ್ಲುಗಳಲ್ಲಿ ಹಲವು ದಿನಗಳಿಂದ ಯುವಕರ ತಂಡವೊಂದು ಮಾದಕ ವ್ಯಸನ ಮಾಡುತ್ತಿತ್ತು ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಸ್ಥಳೀಯರು ರವಿವಾರ ಸಂಜೆ ತಂಡ ಇದ್ದ ಸ್ಥಳಕ್ಕೆ ತೆರಳಿ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ. ಎಚ್ಚರಿಕೆ ನೀಡಿದ್ದ ಸ್ಥಳೀಯರ ತಂಡದಲ್ಲಿ ರಿಕ್ಷಾ ಚಾಲಕ ಸುನೀಲ್‌ ಇದ್ದರು ಎನ್ನಲಾಗಿದ್ದು, ಈ ಕಾರಣಕ್ಕಾಗಿ ಆರೋಪಿಗಳು ರಿಕ್ಷಾವನ್ನು ತಡೆದು ಸುನೀಲ್‌ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಸ್ಥಳೀಯರು ಸುರತ್ಕಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಅಮಲ್‌ ಎಂಬಾತನ್ನು ವಶಕ್ಕೆ ಪಡೆದಿದ್ದರು. ಮತ್ತಿಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್‌ ಪೊಲೀಸರು ಬಳಿಕ ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಪ್ರತೀಕ್‌ ಮತ್ತು ನಿಶಾಂತ್‌ನನ್ನು ಬಂಧಿಸಿದ್ದಾರೆ.

Similar News