ಸೇನಾ ಕಸ್ಟಡಿಯಿಂದ ‘ನಾಪತ್ತೆಯಾದ’ ವ್ಯಕ್ತಿಯ ಶವ ಪತ್ತೆ: ತನಿಖೆಗೆ ಜಮ್ಮು-ಕಾಶ್ಮೀರ ನಾಯಕರ ಒತ್ತಾಯ

Update: 2023-03-03 15:14 GMT

ಶ್ರೀನಗರ, ಮಾ. 3: ಮೂರು ತಿಂಗಳ ಹಿಂದೆ ಸೇನಾ ಕಸ್ಟಡಿಯಲ್ಲಿದ್ದ ವೇಳೆ ‘‘ನಾಪತ್ತೆಯಾಗಿದ್ದ’’ ವ್ಯಕ್ತಿಯೋರ್ವನ ಶವ ಪತ್ತೆಯಾದ ಬಳಿಕ, ಸಾವಿನ ಬಗ್ಗೆ ನಿಷ್ಪಕ್ಷ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರದ ಹಲವು ರಾಜಕೀಯ ಪಕ್ಷಗಳ ನಾಯಕರು ಗುರುವಾರ ಒತ್ತಾಯಿಸಿದ್ದಾರೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕುನಾನ್ ಗ್ರಾಮದ ನಿವಾಸಿ ಅಬ್ದುಲ್ ರಶೀದ್ ದಾರ್ರನ್ನು ಸೇನೆಯ 41 ರಾಷ್ಟ್ರೀಯ ರೈಫಲ್ಸ್ ಘಟಕದ ಸೈನಿಕರು ವಿಚಾರಣೆಗಾಗಿ ಡಿಸೆಂಬರ್ 15ರಂದು ಅವರ ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದರು. ಒಂದು ದಿನದ ಬಳಿಕ, ದಾರ್ ಸೇನೆಯ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂಬುದಾಗಿ ಪೊಲೀಸರು ಅವರ ಮನೆಯವರಿಗೆ ಹೇಳಿದ್ದರು. ಅಂದಿನಿಂದ ಅವರು ಎಲ್ಲಿದ್ದಾರೆ ಎನ್ನುವುದು ಗೊತ್ತಿರಲಿಲ್ಲ.

ದಾರ್ರ ಶವವನ್ನು ಕುಪ್ವಾರದಲ್ಲಿರುವ ಅರಣ್ಯದಲ್ಲಿ ಪತ್ತೆಹಚ್ಚಲಾಗಿದೆ ಹಾಗೂ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಬುಧವಾರ ನೀಡಿರುವ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಬೃಹತ್ ಪ್ರತಿಭಟನೆ

ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಕೂಡಲೇ, ಕುಪ್ವಾರದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿ ಸೇನೆಯ ವಿರುದ್ಧ ಪ್ರತಿಭಟನೆ ನಡೆಸಿದರು. ದಾರ್ರನ್ನು ಸೇನೆಯ ಕಸ್ಟಡಿಯಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿದ ಅವರು ನ್ಯಾಯಕ್ಕಾಗಿ ಆಗ್ರಹಿಸಿದರು.

1989ರಿಂದ 2006ರ ನಡುವಿನ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 8,000ದಿಂದ 10,000 ಮಂದಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಮಾನವಹಕ್ಕುಗಳ ಸಂಘಟನೆ ‘ಅಸೋಸಿಯೇಶನ್ ಆಫ್ ಪೇರೆಂಟ್ಸ್ ಆಫ್ ಡಿಸೆಪ್ಪಿಯರ್ಡ್ ಪರ್ಸನ್ಸ್’ ತಿಳಿಸಿದೆ.
2017ರ ಬಳಿಕ, ವಿಚಾರಣೆಗಾಗಿ ಸೇನೆಯ ವಶಕ್ಕೆ ಒಳಗಾಗಿ ನಾಪತ್ತೆಯಾಗಿರುವ ಮೂರನೇ ನಾಗರಿಕ ದಾರ್ ಆಗಿದ್ದಾರೆ.

ಉತ್ತರದಾಯಿತ್ವ ಇಲ್ಲದ ಸ್ಥಿತಿಯಲ್ಲಿ ಇಂಥ ಕೊಲೆಗಳು ಸಾಮಾನ್ಯ: ಮೆಹಬೂಬಾ

ಸಂವಿಧಾನದ 370ನೇ ವಿಧಿಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರವು ರದ್ದುಪಡಿಸಿದ ಬಳಿಕ, ‘‘ಉತ್ತರದಾಯಿತ್ವದ ಅನುಪಸ್ಥಿತಿಯಲ್ಲಿ ಇಂಥ ಘಟನೆಗಳು ನಡೆಯುವುದು ಸಾಮಾನ್ಯವಾಗಿದೆ’’ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಗುರುವಾರ ಟ್ವಿಟರ್ನಲ್ಲಿ ಬರೆದಿದ್ದಾರೆ.

‘‘ಅಬ್ದುಲ್ ರಶೀದ್ ರ ವಿರೂಪಗೊಂಡಿರುವ ದೇಹದ ಚಿತ್ರಗಳನ್ನು ನೋಡಿ ಆಘಾತವಾಗಿದೆ. ಭದ್ರತೆಯ ನೆಪವೊಡ್ಡಿ, ಮೃತನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ನನಗೆ ಅವಕಾಶ ನಿರಾಕರಿಸಲಾಗಿದೆ. ತಿಂಗಳುಗಳ ಹಿಂದೆ, ವಿಚಾರಣೆಗಾಗಿ ಸೇನೆಯು ಅವರನ್ನು ವಶಕ್ಕೆ ಪಡೆದ ಬಳಿಕ ಏನಾಯಿತು ಎನ್ನುವುದನ್ನು ಯಾರೂ ಊಹಿಸಬಹುದಾಗಿದೆ’’ ಎಂದು ಅವರು ಹೇಳಿದರು.

ಪ್ರಕರಣದ ಬಗ್ಗೆ ‘‘ಪ್ರಾಮಾಣಿಕ ತನಿಖೆ’’ ನಡೆಯಬೇಕಾದ ಅಗತ್ಯವಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರವು ನಾಪತ್ತೆಯಾಗಿರುವವರ ದೊಡ್ಡ ಇತಿಹಾಸವನ್ನೇ ಹೊಂದಿದೆ ಎಂದು ಸಿಪಿಎಮ್ ಪಕ್ಷದ ನಾಯಕ ಎಮ್.ವೈ. ತರಿಗಮಿ ಹೇಳಿದರು. ದಾರ್ರ ನಿಗೂಢ ಸಾವಿನ ಬಗ್ಗೆ ಕೂಲಂಕಷ ತನಿಖೆಯಾಗಬೇಕಾದ ಅಗತ್ಯವಿದೆ ಎಂದು ಅವರು ನುಡಿದರು.
ಸಾವಿನ ಬಗ್ಗೆ ಕ್ಷಿಪ್ರ ಹಾಗೂ ನಿಷ್ಪಕ್ಷ ತನಿಖೆಯಾಗಬೇಕು ಎಂದು ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೋನ್ ಒತ್ತಾಯಿಸಿದರು. ಅದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮರಳಿದೆ ಎಂಬ ಕೇಂದ್ರ ಸರಕಾರದ ಹೇಳಿಕೆಯನ್ನು ನ್ಯಾಶನಲ್ ಕಾನ್ಫರೆನ್ಸ್ ನಾಯಕಿ ಸಾರಾ ಹಯಾತ್ ಶಾ ಪ್ರಶ್ನಿಸಿದರು.

ಕೊಲೆಯನ್ನು ಮುಚ್ಚಿಹಾಕಲು ಸೇನೆ ಹೇಳುತ್ತಿರುವ ಹಸಿ ಸುಳ್ಳು: ಮೃತನ ಸಹೋದರ ಆರೋಪ

ತನ್ನ ಕಸ್ಟಡಿಯಲ್ಲಿದ್ದ ಅಬ್ದುಲ್ ರಶೀದ್ ದಾರ್ ರನ್ನು ಸೇನೆಯು ಕೊಂದಿದೆ ಎಂದು ಅವರ ಅಣ್ಣ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ನಲ್ಲಿ ವಿಶೇಷ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಶಬೀರ್ ಅಹ್ದಮ್ ದಾರ್ ಆರೋಪಿಸಿದ್ದಾರೆ ಎಂದು ‘Thewire’ ವರದಿ ಮಾಡಿದೆ.

ತನ್ನ ಸಹೋದರ ಸೇನೆಯ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವ ಸೇನೆಯ ಹೇಳಿಕೆಯನ್ನು ಅವರು ತಿರಸ್ಕರಿಸಿದ್ದಾರೆ. ‘‘ಇದು ಕೊಲೆಯನ್ನು ಮುಚ್ಚಿ ಹಾಕುವುದಕ್ಕಾಗಿ ಅದು ಹೇಳುತ್ತಿರುವ ಹಸಿ ಹಸಿ ಸುಳ್ಳಾಗಿದೆ’’ ಎಂದು ಅವರು ಹೇಳಿದ್ದಾರೆ. ರಶೀದ್ ದಾರ್ ಕಾನೂನು ಅನುಷ್ಠಾನ ಸಂಸ್ಥೆಗಳಿಂದ ಯಾವತ್ತೂ ತಲೆಮರೆಸಿಕೊಂಡಿರಲಿಲ್ಲ ಎಂದು ಡಿಸೆಂಬರ್ನಲ್ಲಿ ಅವರು ‘ಸ್ಕ್ರಾಲ್’ನೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಯಾವುದೇ ಪೊಲೀಸ್ ದಾಖಲೆಗೂ ಅವರು ಸೇರಿಲ್ಲ. ಅವರ ವಿರುದ್ಧ ಒಂದೇ ಒಂದು ಪ್ರಕರಣವಿಲ್ಲ. ಹಿಂದೆಲ್ಲಾ ಪ್ರತಿಭಟನೆಗಳು ನಡೆಯುತ್ತಿದ್ದರೂ ಅವರು ಅದರಲ್ಲಿ ಯಾವತ್ತೂ ಭಾಗವಹಿಸಿರಲಿಲ್ಲ’’ ಎಂದು ಶಬೀರ್ ಅಹ್ಮದ್ ದಾರ್ ಹೇಳಿದ್ದರು.

Similar News