ಸುಸ್ಥಿತಿಯಲ್ಲಿರುವ ರಸ್ತೆ ಅಗೆಯುವುದಕ್ಕೆ ವಿರೋಧ: ಜೆಸಿಬಿ ಮುಂದೆ ರಸ್ತೆಯಲ್ಲೇ ಕುಳಿತು ನಿತ್ಯಾನಂದ ಒಳಕಾಡು ಪ್ರತಿಭಟನೆ
ಉಡುಪಿ, ಮಾ.6: ನಗರದ ಕುಂಜಿಬೆಟ್ಟು ಶಾರದಾ ಮಂಟಪದಿಂದ ಬೀಡಿನ ಗುಡ್ಡೆವರೆಗಿನ ಸುಸ್ಥಿತಿಯಲ್ಲಿರುವ ರಸ್ತೆಯನ್ನು ಅಗೆದು ಕಾಂಕ್ರೀಟೀಕರಣ ಮಾಡುತ್ತಿರುವುದಾಗಿ ಆರೋಪಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ನಿತ್ಯಾನಂದ ಒಳಕಾಡು ಸೋಮವಾರ ಜೆಸಿಬಿಗೆ ಅಡ್ಡವಾಗಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಗರಸಭೆ ಬಿಜೆಪಿ ಸದಸ್ಯ ಗಿರೀಶ್ ಅಂಚನ್ ಹಾಗೂ ನಿತ್ಯಾನಂದ ವಳಕಾಡು ನಡುವೆ ಕೆಲಕಾಲ ವಾಗ್ವಾದಗಳು ನಡೆದವು. ಐದು ದಿನಗಳಿಂದ ಕಾಂಕ್ರಿಟ್ ರಸ್ತೆಯನ್ನು ಅಗೆಯುತ್ತಿದ್ದು ಇದಕ್ಕೆ ನಿತ್ಯಾನಂದ ಒಳಕಾಡು ಎರಡು ದಿನಗಳ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ನಗರ ಸಭೆಯ ಅಧಿಕಾರಿಗಳನ್ನು ಈ ಕುರಿತಾಗಿ ಗಮನ ಸೆಳೆಯಲಾಗಿತ್ತು. ಸದೃಢವಾಗಿರುವ ರಸ್ತೆಯನ್ನು ಅಗೆದು ಮರು ಕಾಂಕ್ರೀಟೀಕರಣ ಮಾಡುವುದು ಸರಿಯಲ್ಲ. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ. ಇದೊಂದು ದುಂದು ವೆಚ್ಚದ ಕಾಮಗಾರಿ ಎಂದು ನಿತ್ಯಾನಂದ ಒಳಕಾಡು ಆರೋಪಿಸಿದರು.
27 ವರ್ಷಗಳ ಹಿಂದಿನ ಕಾಂಕ್ರಿಟ್ ರಸ್ತೆ ಗುಣಮಟ್ಟ ಕಳೆದುಕೊಂಡಿದೆ. ಹೆದ್ದಾರಿಯಿಂದ ಶಾರದಾ ಮಂಟಪವರೆಗೆ ಈಗಾಗಲೇ ಹೊಸ ರಸ್ತೆ ನಿರ್ಮಾಣವಾಗಿದೆ. ಒಳಚರಂಡಿ ನಿರ್ಮಾಣ ಮಾಡುವ ಸಂದರ್ಭ ಅಲ್ಲಲ್ಲಿ ರಸ್ತೆ ಹಾಳಾಗಿದ್ದು ಹೊಸ ರಸ್ತೆ ನಿರ್ಮಾಣ ಆಗಬೇಕಾಗಿದೆ ಎಂಬದು ನಗರಸಭಾ ಸದಸ್ಯ ಗಿರೀಶ್ ಅಂಚನ್ ಕಾಮಗಾರಿಯನ್ನು ಸಮರ್ಥಿಸಿಕೊಂಡರು.
ಅಲ್ಲಿ ನೆರೆದ ಸ್ಥಳೀಯರು, ಹೊಸ ರಸ್ತೆಯನ್ನು ನಮಗೆ ನಿರ್ಮಾಣ ಮಾಡಿ ಕೊಡಿ. ಹಳೆಯ ರಸ್ತೆ ಮತ್ತು ಹೊಸ ರಸ್ತೆ ಅಗಲ ಎತ್ತರ ವ್ಯತ್ಯಾಸ ಬರುತ್ತದೆ. ಮುಂದೆ ಮಳೆಗಾಲದಲ್ಲಿ ಹೊಂಡ ಬೀಳುವ ಸಾಧ್ಯತೆ ಇದೆ ಎಂದು ದೂರಿದರು.
ಈ ಬಗ್ಗೆ ನಿತ್ಯಾನಂದ ಒಳಕಾಡು ನಗರಸಭೆ ಕಮಿಷನರ್ ಗಮನ ಸೆಳೆದಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಕಾಂಕ್ರಿಟ್ ರಸ್ತೆ ಅಗೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.