×
Ad

ತಂದೆಗೆ ಏನಾದರೂ ಆದರೆ ಯಾರನ್ನೂ ಬಿಡುವುದಿಲ್ಲ: ಲಾಲು ಪ್ರಸಾದ್ ಅವರ ಸಿಬಿಐ ವಿಚಾರಣೆಗೆ ಪುತ್ರಿ ರೋಹಿಣಿ ಎಚ್ಚರಿಕೆ

Update: 2023-03-07 15:46 IST

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಮಂಗಳವಾರ  ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವರಿಷ್ಠರಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ.  ಅವರಿಗೆ ಏನಾದರೂ ಆದರೆ "ಯಾರನ್ನೂ ಬಿಡುವುದಿಲ್ಲ" ಎಂದು ಲಾಲೂ ಪ್ರಸಾದ್ ಅವರ ಪುತ್ರಿ ಎಚ್ಚರಿಸಿದ್ದಾರೆ.

ನನ್ನ ತಂದೆಗೆ ಕಿರುಕುಳ ನೀಡುತ್ತಿರುವ ರೀತಿ ಸರಿಯಿಲ್ಲ. ಇವೆಲ್ಲವನ್ನೂ ನೆನಪಿಡಲಾಗುತ್ತದೆ. ಸಮಯ ತುಂಬಾ ಪವರ್‌ಫುಲ್ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಅವರ ಎರಡನೇ ಪುತ್ರಿ ರೋಹಿಣಿ ಆಚಾರ್ಯ ಹಿಂದಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

“ 74 ವರ್ಷದ ನಾಯಕ ಇನ್ನೂ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸಲು ಸಮರ್ಥರಾಗಿದ್ದಾರೆ. ಸಹಿಷ್ಣುತೆಯ ಮಿತಿಗಳನ್ನು ಈಗ ಪರೀಕ್ಷಿಸಲಾಗುತ್ತಿದೆ" ಎಂದು ರೋಹಿಣಿ ಮತ್ತೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

ಡಿಸೆಂಬರ್‌ನಲ್ಲಿ ರೋಹಿಣಿ  ಆಚಾರ್ಯ ಅವರು ತಮ್ಮ ಒಂದು ಮೂತ್ರಪಿಂಡವನ್ನು ಲಾಲು ಪ್ರಸಾದ್ ಯಾದವ್‌ಗೆ ದಾನ ಮಾಡಿದ್ದರು. ಸಿಂಗಾಪುರದ ಆಸ್ಪತ್ರೆಯಲ್ಲಿ ಲಾಲು ಅವರ ಕಿಡ್ನಿ ಕಸಿ ನಡೆದಿದೆ.

ಶಸ್ತ್ರಚಿಕಿತ್ಸೆಯ ನಂತರ  ಹಿರಿಯ ರಾಜಕಾರಣಿ ದಿಲ್ಲಿಯಲ್ಲಿ ತಮ್ಮ ಪುತ್ರಿ ಹಾಗೂ  ಸಂಸದೆ ಮಿಸಾ ಭಾರ್ತಿ ಅವರ ನಿವಾಸದಲ್ಲಿ ತಂಗಿದ್ದಾರೆ. ಇಂದು ಮಿಸಾ ಭಾರ್ತಿ  ನಿವಾಸಕ್ಕೆ ತೆರಳಿದ ಸಿಬಿಐ ಅಧಿಕಾರಿಗಳು ಲಾಲು ಅವರ ವಿಚಾರಣೆ ನಡೆಸಿದ್ದಾರೆ.

Similar News