ಶಿವಾಜಿ ತತ್ವಾದರ್ಶ ಮೈಗೂಡಿಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ: ದಿನೇಶ್ ನಾಯ್ಕ್
ಉಡುಪಿ : ರಾಷ್ಟ್ರಕಂಡ ಮೇರು ವ್ಯಕ್ತಿತ್ವದ ಶಿವಾಜಿ ಮಹಾರಾಜರ ಧೈರ್ಯ, ತತ್ವಾದರ್ಶಗಳನ್ನು ಮೈಗೂಡಿಸಿ ಕೊಂಡು ಸಮಾಜವನ್ನು ಮುನ್ನಡೆಸಿ ದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶಿವಾಜಿಯನ್ನು ಬೆಂಬಲಿಸುವ ಸಂಘಟನೆ ಗಳು ಇನ್ನಷ್ಟು ಬಲಿಷ್ಠವಾಗಬೇಕಾಗಿದೆ ಎಂದು ಉಡುಪಿಯ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ದಿನೇಶ್ ಸಿ.ನಾಯ್ಕ್ ತಿಳಿಸಿದ್ದಾರೆ.
ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಯನ್ನು ಆಚರಿಸಿ ಅವರು ಮಾತನಾಡುತಿದ್ದರು.
ಸಹಕಾರಿ ಸಂಘದ ನಿರ್ದೇಶಕ ಚಂದ್ರ ಎಚ್.ನಾಯ್ಕ್ ಮಾತನಾಡಿ, ನಮ್ಮ ದೇಶವನ್ನು ರಕ್ಷಣೆ ಮಾಡಲು ಹುಟ್ಟಿ ಬಂದ ಶಿವಾಜಿ ಮಹಾರಾಜರ ಚಾಣಾಕ್ಷ ಮತಿಯುಳ್ಳ ವಿವಿಧ ಯುದ್ಧ ಕೌಶಲಗಳು ಶತ್ರುಗಳ ಬೆವರಿಸುವಂತೆ ಮಾಡಿತ್ತು. ಶಿವಾಜಿ ಹುಟ್ಟಿನಿಂದಲೂ ಧೈರ್ಯ ವಂತನಾಗಿದ್ದರು ಎಂದರು.
ಸಂಘದ ಉಪಾಧ್ಯಕ್ಷ ಲಕ್ಷ್ಮಣ ನಾಯ್ಕ್, ನಿರ್ದೇಶಕರಾದ ಆರ್.ಸಿ.ನಾಯ್ಕ್, ರಘುನಾಥ್ ನಾಯ್ಕ್, ಸತೀಶ್ ನಾಯ್ಕ್, ಗಣೇಶ್ ನಾಯ್ಕ್, ಸುರೇಶ ಅಮೀನ್, ಕರುಣಾಕರ ಕಾಂಚನ, ವಿವಿಧ ಸಹಕಾರಿ ಸಂಘಗಳ ಸಿಇಓ ಗಳಾದ ಪ್ರಕಾಶ್ ಸುವರ್ಣ ಕಟಪಾಡಿ, ಲೋಹಿತ್ ಸಾಲಿಯಾನ್, ರವೀಶ್ ನಾಯ್ಕ್, ಸದಾಶಿವ ಶೆಟ್ಟಿ ಹಾಗೂ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.