ಅಲ್-ಅಮೀನ್ ಯೂತ್ ಫೆಡರೇಶನ್ ಕೊಡಂಗಾಯಿ "ರಜತ ಸಂಭ್ರಮ"ದ ಲಾಂಛನ ಅನಾವರಣ
ಬಂಟ್ವಾಳ : ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಯನ್ನು ಕೇಂದ್ರವಾಗಿರಿಸಿಕೊಂಡು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧಾರ್ಮಿಕ ಸೌಹಾರ್ದತೆಯ ಸಂದೇಶ ಸಾರುತ್ತ ಕಳೆದ ಇಪ್ಪತ್ತಮೂರು ವರ್ಷಗಳಿಂದ ಸಮಾಜ ಸೇವೆಯಲ್ಲಿರುವ ಅಲ್-ಅಮೀನ್ ಯೂತ್ ಫೆಡರೇಶನ್ (ರಿ) ಕೊಡಂಗಾಯಿ ಇದರ "ರಜತ ಸಂಭ್ರಮ"ದ ಲಾಂಛನ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಸಂಘಟನೆಯ ಕಛೇರಿಯಲ್ಲಿ ಸಮಿತಿ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಅಧ್ಯಕ್ಷ ಸಮದ್ ಸಿಎಚ್ ಮಾತನಾಡಿ, 2025'ರಲ್ಲಿ ನಡೆಯುವ 25 ನೇ ವಾರ್ಷಿಕೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಸಂಕಲ್ಪದೊಂದಿಗೆ ಈಗಲೇ ಸಂಘಟನೆ ತಯಾರಿ ನಡೆಸುತ್ತಿದೆ.
2023ನೇ ವರ್ಷದ ಕೊನೆಯಲ್ಲಿ ರಜತ ಸಂಭ್ರಮದ ಸ್ವಾಗತ ಸಮಿತಿಯನ್ನು ರೂಪಿಕರಿಸಿ 2024 ರಲ್ಲಿ ವರ್ಷ ಪೂರ್ತಿ ವಿವಿಧ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು 2025ರ ಆರಂಭದಲ್ಲಿ ಸಂಘಟನೆಯ ಬಹು ನಿರೀಕ್ಷಿತ ರಜತ ಸಂಭ್ರಮವನ್ನು ಬಹಳ ಸಡಗರದಿಂದ ಆಚರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸಂಘಟನೆಯ ಪ್ರ ಕಾರ್ಯದರ್ಶಿ ಶರೀಫ್ ಎಂ, ಕೋಶಾಧಿಕಾರಿ ಮಜೀದ್ ಟಿ ಯಂ, ಕಾರ್ಯದರ್ಶಿ ರಫೀಕ್ ಪಿ, ಫಂಡ್ ಸಂಗ್ರಾಹಕ ಮುಹಮ್ಮದ್ ಯಂ ಕೆ, ಹಾಗೂ ಸದಸ್ಯರಾದ ರಝಾಕ್ ಎಂ ಕೆ, ನಾಸಿರ್ ಕೆ,ಇಲ್ಯಾಸ್ ಕೆ, ಹಸೈನಾರ್ ಟಿ ಯಂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶರೀಫ್ ಯಂ ಸ್ವಾಗತಿಸಿ ರಫೀಕ್ ಪಿ ವಂದಿಸಿದರು.