×
Ad

ಇಸ್ಮತ್ ಪಜೀರ್‌ರ ‘ಪಾಲ’ ಬ್ಯಾರಿ ಕೃತಿ ಬಿಡುಗಡೆ

Update: 2023-03-11 19:46 IST

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಲೇಖಕ ಇಸ್ಮತ್ ಪಜೀರ್ ರಚಿಸಿದ ಬ್ಯಾರಿ ವಿಮರ್ಶಾ ಲೇಖನಗಳ ಸಂಕಲನ ‘ಪಾಲ’ ಕೃತಿಯ ಬಿಡುಗಡೆ ಕಾರ್ಯಕ್ರಮವು ಶನಿವಾರ ನಗರದ ವಿವಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಸಾರಾಂಗದ ಉಪನಿರ್ದೇಶಕ ಡಾ. ಧನಂಜಯ ಕುಂಬ್ಳೆ ‘ಕರಾವಳಿ ತೀರದಲ್ಲಿ ವೈಚಾರಿಕ ಬರೆಹಗಾರರ ಸಂಖ್ಯೆ ತೀರಾ ಕಡಿಮೆಯಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಮುಸ್ಲಿಂ ಸಮುದಾಯದ ಬರೆಹಗಾರರು ವೈಚಾರಿಕ ದೃಷ್ಟಿಕೋನದಿಂದ ಬರೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಭಾಷೆಯೊಂದರ ಪ್ರಕಟಿತ ಕೃತಿಗಳ ಬಗ್ಗೆ ವಿಮರ್ಶಾ ಸಂಕಲನ ಹೊರಬರುತ್ತಿರುವುದು ಆ ಭಾಷೆಯ ಪ್ರೌಢತೆಗೆ ಸಾಕ್ಷಿಯಾಗಿದೆ. ಇದೀಗ ‘ಪಾಲ’ದ ಮೂಲಕ ಬ್ಯಾರಿ ಭಾಷೆಯೂ ಪ್ರೌಢತೆಗೆ ಪ್ರಾಪ್ತವಾಗಿರುವುದು ಸಂತಸದ ವಿಚಾರ’ ಎಂದರು.

ಉಪನ್ಯಾಸ ನೀಡಿದ ಬ್ಯಾರಿ ವಾರ್ತೆ ಮಾಸಿಕದ ಉಪ ಸಂಪಾದಕ ಮುಹಮ್ಮದಲಿ ಕಮ್ಮರಡಿ ‘ಬ್ಯಾರಿ ಸಾಹಿತ್ಯ ಅಕಾಡಮಿಯಲ್ಲಿ ಈಗ ಯಾವ ಚಟುವಟಿಕೆಯೂ ನಡೆಯುತ್ತಿಲ್ಲ. ಹಾಗಾಗಿ ಬ್ಯಾರಿ ಅಧ್ಯಯನ ಪೀಠಕ್ಕೆ ಹೆಚ್ಚಿನ ಜವಾಬ್ದಾರಿ ಇದೆ. ‘ಬ್ಯಾರಿ’ ಕ್ಷೇತ್ರ ಕಾರ್ಯ ನಡೆಸುವ ಯುವ ಸಂಶೋಧಕರಿಗೆ ಮಾರ್ಗದರ್ಶನ ಮತ್ತು ಆಸಕ್ತಿಯಿಂದ ಬರೆಯುವ ಯುವ ಲೇಖಕ-ಲೇಖಕಿಯರಿಗೆ ಸಾಹಿತ್ಯ ಕಮ್ಮಟಗಳನ್ನು ಆಯೋಜಿಸಲು ಮುಂದಾಗಬೇಕು’ ಎಂದು ಹೇಳಿದರು.

ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಅಬ್ದುಲ್ ಖಾದರ್ ಕುತ್ತೆತ್ತೂರು ‘ಬ್ಯಾರಿ ಭಾಷೆಯಲ್ಲಿ ಪ್ರಕಟಗೊಂಡ ಕೃತಿಗಳ ಬಗ್ಗೆ ವಿಮರ್ಶಿಸಲ್ಪಟ್ಟ ಲೇಖನಗಳನ್ನು ಒಳಗೊಂಡ ಸಂಕಲನವು ಇದೇ ಮೊದಲ ಬಾರಿಗೆ ಪ್ರಕಟಗೊಳ್ಳುತ್ತಿವೆ. ಬ್ಯಾರಿಯಲ್ಲಿ ವಿಮರ್ಶಾ ಸಂಕಲನ ಪ್ರಕಟಗೊಂಡಿಲ್ಲ ಎಂಬ ಆ ಕೊರತೆಯನ್ನು ಈ ಮೂಲಕ ನೀಗಿಸಲಾಗಿದೆ’ ಎಂದರು.

ಮಂಗಳೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅತಿಥಿಯಾಗಿ ಭಾಗವಹಿಸಿದ್ದರು. ಲೇಖಕ ಇಸ್ಮತ್ ಪಜೀರ್ ಕೃತಿ ರಚನೆಗೆ ಸಂಬಂಧಿಸಿದಂತೆ ಅನುಭವ ಹಂಚಿಕೊಂಡರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಸ್ವಾಗತಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಅಹ್ಮದ್ ಬಾವಾ ಪಡೀಲ್ ವಂದಿಸಿದರು. ಉಪನ್ಯಾಸಕಿ ಶಹಲಾ ರಹ್ಮಾನ್ ಕಾರ್ಯಕ್ರಮ ನಿರೂಪಿಸಿದರು.

Similar News