ದಲಿತ ದೌರ್ಜನ್ಯ ನಿಷೇಧ ಕಾಯ್ದೆಯನ್ನು ಸಮಗ್ರ ಜಾರಿಗೆ ಆಗ್ರಹ: ಸಚಿವ ಕೋಟ ನಿವಾಸದ ಮುಂದೆ ಧರಣಿ

Update: 2023-03-13 15:53 GMT

ಕುಂದಾಪುರ, ಮಾ.13: ಸಾಮಾಜಿಕ ಅಸಮತೋಲನ ತೊಡೆದು ಹಾಕುವಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು, ರಾಜ್ಯದಲ್ಲಿ ದಲಿತರನ್ನು ತುಚ್ಛವಾಗಿ ಕಾಣಲಾಗುತ್ತಿದೆ. ದೌರ್ಜನ್ಯ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತರಬೇಕು. ಇಲ್ಲದೇ ಇದ್ದರೆ ಕುರ್ಚಿ ಖಾಲಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ರಾಜಗಿರಿ ಒತ್ತಾಯಿಸಿದ್ದಾರೆ.

ಕೋಟದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿವಾಸದ ಮುಂದೆ ಸೋಮವಾರ ಚಿತ್ರದುರ್ಗದ ಹಿರೆಕೆರೆ ಯೂರು ಚಳ್ಳೆಕೆರೆ ವ್ಯಾಪ್ತಿಯ ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. 

ಕೇಂದ್ರ ಸರಕಾರ 1989ರಲ್ಲಿ ದಲಿತರಿಗಾಗಿ ತಂದ ಕಾಯಿದೆಯನ್ನು ಅನುಷ್ಠಾನ ಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಇಂದಿಗೂ ರಾಜ್ಯದ ಹೆಚ್ಚಿನ ಭಾಗದಲ್ಲಿ ದಲಿತರು ಕೂಲಿ ಮಾಡಿ ಬದುಕುತ್ತಿದ್ದಾರೆ. ಅಲ್ಲದೇ ಸಾಮಾಜಿಕವಾಗಿ ಬಹಿಷ್ಕಾರ ಹಾಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ರಾಜಕೀಯ ಪಕ್ಷಗಳು ದಲಿತರನ್ನು ಉಪಯೋಗಿಸಿ ಅವರನ್ನು ತುಳಿಯುವ ಮನಸ್ಥಿತಿ ಸೃಷ್ಠಿಸಿದ್ದಾರೆ. ಅನೇಕ ಬಾರಿ ಸರಕಾರ ಮತ್ತು ಸಚಿವರ ಮುಂದೆ ಪ್ರತಿಭಟನೆ ನಡೆಸಿದರೂ ನಮಗೆ ನ್ಯಾಯ ದೊರಕಿಲ್ಲ ಎಂದು ಅವರು ಆರೋಪಿಸಿದರು.

1989ರ ಎಸ್ಸಿ-ಎಸ್ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಬರುವ ಸಂತ್ರಸ್ತರು, ಕುಟುಂಬದ ಸದಸ್ಯರು ಮತ್ತು ಅವಲಂಬಿತರಿಗೆ ಮೂಲಭೂತ ಸೌಕರ್ಯಗಳ ಒದಗಿಸುವುದು, ದೌರ್ಜನ್ಯ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿರಿಸಿ ಪ್ರತಿಭಟನೆಗೆ ನಿರತರಾಗಿದ್ದೇವೆ. ವಿವಿಧ ಸಚಿವರ ಮನೆಯ ಮುಂದೆ, ಕಬ್ಬನ್ ಪಾರ್ಕ್, ವಿಧಾನಸೌಧಗಳಲ್ಲಿಯೂ ನಾವು ಪ್ರತಿಭಟನೆ ನಡೆಸಿದ್ದೇವೆ. ನೂರಾರು ಬಾರಿ ಮನವಿ ಮಾಡಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.

ನಮಗೆ ಆಶ್ವಾಸನೆ ಬೇಡ. ರಾಜ್ಯದಲ್ಲಿರುವ 156 ಪರಿಶಿಷ್ಟ ಜಾತಿಯ ಸುಮಾರು 1ಕೋಟಿ 60 ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ತಕ್ಷಣ ಈ ಬಗ್ಗೆ ಎಚ್ಚರ ವಹಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಗಟ್ಟಿಗೊಳಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. 

ಸಚಿವರು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನಾಗರಾಜ್, ಜಗದೀಶ್, ನರಸಪ್ಪ, ಪೂಜಾರಿ ಕಿಟ್ಟಿ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

Similar News