×
Ad

​ಮಾ.23ರಂದು ಕಯ್ಯಾರ ಕಿಞ್ಞಣ್ಣ ರೈ ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನ ಕಟ್ಟಡಕ್ಕೆ ಶಿಲಾನ್ಯಾಸ

Update: 2023-03-18 18:47 IST

ಮಂಗಳೂರು, ಮಾ.18: ನಾಡೋಜ ಕವಿ ಡಾ.ಕಯ್ಯಾರ ಕಿಞ್ಞಣ್ಣ ರೈ ಸಾಂಸ್ಕೃತಿಕ  ಕನ್ನಡ ಅಧ್ಯಯನ ಭವನ ಕಟ್ಟಡದ ಶಿಲಾನ್ಯಾಸ ಮಾ.23ರಂದು ಪೂರ್ವಾಹ್ನ 11 ಗಂಟೆಗೆ ಕಾಸರಗೋಡಿನ ಬತ್ತೇರಿ ಕಲ್ಲಕಳಿಯದಲ್ಲಿ ನಡೆಯಲಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಯ್ಯಾರ ಕಿಞ್ಞಣ್ಣ ರೈ ಅವರ ಪುತ್ರ ಮತ್ತು ಕವಿತಾ ಕುಟೀರ ಕಾರ್ಯದರ್ಶಿ ಡಾ.ಪ್ರಸನ್ನ ರೈ, ಬದಿಯಡ್ಕ ಪೆರಡಾಲ ಶ್ರೀ ಗುರುಸದನದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಕವಿತಾ ಕುಟೀರ ಪೆರಡಾಲ ಮತ್ತು ನಾಡೋಜ ಕಯ್ಯಾರ  ಕಿಞ್ಞಣ್ಣ ರೈ  ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನ ನಿರ್ಮಾಣ ಸಮಿತಿ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಲಿರುವರು. ಭವನ ನಿರ್ಮಾಣಕ್ಕೆ ರಾಜ್ಯ ಸರಕಾರ ಬಜೆಟ್‌ನಲ್ಲಿ 2 ಕೋಟಿ ರೂ.ಅನುದಾನ ಮಂಜೂರು ಮಾಡಿದೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒಟ್ಟು 1.10 ಕೋಟಿ ರೂ. ಬಿಡುಗಡೆಯಾಗಿದೆ. ಕವಿತಾ ಕುಟೀರ ಸಂಸ್ಥೆಯ ಅಭಿಯಂತರ ಸಲಹೆಗಾರ ಗೋಪಿನಾಥ್ ಹಾಗೂ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಮೂಲಕ ನೀಲ ನಕ್ಷೆ ಮತ್ತು ಅಂದಾಜುಪಟ್ಟಿ ತಯಾರಿಸಿದ್ದಾರೆ. ಇದಕ್ಕೆ  ಆಡಳಿತಾತ್ಮಕ ಮಂಜೂರಾತಿ ಲಭಿಸಿದೆ. ತಲಾ 6 ಸಾವಿರ ಅಡಿಗಳ ಕೆಳ ಅಂತಸ್ತು ಮತ್ತು ಮೇಲಂತಸ್ತು ಹೊಂದಿರುವ ಕಟ್ಟಡದಲ್ಲಿ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಸಭಾಂಗಣ ಮೊದಲಾದ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದು ದ.ಕ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ  ತಿಳಿಸಿದರು.

ಕಯ್ಯಾರ  ಕಿಞ್ಞಣ್ಣ ರೈ ಅವರ ಹಿರಿಯ ಪುತ್ರ, ಕವಿತಾ ಕುಟೀರ ಅಧ್ಯಕ್ಷ ದುರ್ಗಾಪ್ರಸಾದ ರೈ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಪ್ರಮುಖರಾದ ಡಾ.ಮುರಲೀ ಮೋಹನ ಚೂಂತಾರು, ವಕೀಲ ಕಳ್ಳಿಗೆ ತಾರಾನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Similar News