ಕೆನಡಾ: ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿ ಖಲಿಸ್ತಾನ್‌ ಪರ ಬರಹ

Update: 2023-03-24 17:07 GMT

ಟೊರಂಟೊ, ಮಾ.24: ಕೆನಡಾದ ಒಂಟಾರಿಯೊದಲ್ಲಿ ಮಹಾತ್ಮಾಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿ, ಖಲಿಸ್ತಾನ್ ಪರ ಬರಹಗಳನ್ನು ಗೀಚಿರುವ ಘಟನೆ ವರದಿಯಾಗಿದೆ.

ಒಂಟಾರಿಯೊ ಪ್ರಾಂತದ ಹ್ಯಾಮಿಲ್ಟನ್ ನಗರ ಪುರಭವನದ ಬಳಿ ಇರುವ ಗಾಂಧೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 2012ರಲ್ಲಿ ಭಾರತ ಸರಕಾರ ಉಡುಗೊರೆಯಾಗಿ ನೀಡಿದ್ದ  ಗಾಂಧೀಜಿಯವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿತ್ತು.

6 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಬಣ್ಣಬಳಿದು ವಿರೂಪಗೊಳಿಸಲಾಗಿದ್ದು ಪ್ರತಿಮೆಯ ತಳಭಾಗದಲ್ಲಿ ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸುವ ಬರಹ ಗೀಚಲಾಗಿದೆ. ಪ್ರತಿಮೆಯ ಕೈಯಲ್ಲಿರುವ ಕೋಲಿಗೆ ಖಲಿಸ್ತಾನ್ ಧ್ವಜವನ್ನು ಸಿಕ್ಕಿಸಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹ್ಯಾಮಿಲ್ಟನ್ ಪೊಲೀಸರು ಹೇಳಿದ್ದಾರೆ.

Similar News