ಮುಸ್ಲಿಮ್ 2B ಮೀಸಲಾತಿ ರದ್ದು: ಉಳ್ಳಾಲ ದರ್ಗಾ ಸಮಿತಿಯಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ

Update: 2023-03-26 09:30 GMT

ಮಂಗಳೂರು,ಮಾ.26: ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ‌ ಮುಸ್ಲಿಮರಿಗೆ ನೀಡುತ್ತಿದ್ದ ಶೇ 4% ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯುತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಖಂಡಿಸಿದ್ದಾರೆ. 

ಈ‌ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಮುಸ್ಲಿಮರಿಗೆ 2B ಅಡಿಯಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಕೈಬಿಟ್ಟಿರುವ ನಿರ್ಧಾರವನ್ನು ಹಿಂಪಡೆಯಲು
ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು ಶೈಕ್ಷಣಿಕವಾಗಿಯೂ, ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನಿಡುತ್ತಿದ್ದ ಶೇ 4% ಮೀಸಲಾತಿ ರದ್ದತಿ ಮುಸ್ಲಿಮರನ್ನು ಶೈಕ್ಷಣಿಕವಾಗಿ ಇನ್ನಷ್ಟು ಹಿಂದೆ ತಳ್ಳಲು ಕಾರಣವಾಗಲಿದೆ ಎಂದಿದ್ದಾರೆ.

1979ರ ಏಪ್ರಿಲ್  9ರ  ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು
ಎಂಬುದು ಅವರನ್ನು ಹಿಂದುಳಿದ  ವರ್ಗಗಳ ಪಟ್ಟಿಯಿಂದ ತೆಗೆಯಲು ಕಾರಣವಾಗವುದಿಲ್ಲ ಎಂದು ಸ್ಪಷ್ಟವಾಗಿ‌
ಆದೇಶಿಸಿದೆ ಎಂದರು.

ಈ ಬಗ್ಗೆ ಉಳ್ಳಾಲ ದರ್ಗಾ ಸಮಿತಿ ಸಾವಿರ ಜಮಾಅತ್ ನ ಮೊಹಲ್ಲಾ ಪದಾಧಿಕಾರಿಗಳ ಜತೆ ಸಭೆ ಕರೆದು 
ಮುಂದಿನ ಹೋರಾಟದ ಬಗ್ಗೆ ಹಾಗೂ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ದರ್ಗಾ
ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News