ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಮೈಸೂರಿನಿಂದ ಮಂಗಳೂರಿಗೆ ಆಗಮಿಸಿದ್ದ ಕುಟುಂಬ

Update: 2023-03-31 15:26 GMT

ಮಂಗಳೂರು, ಮಾ.31: ಸಾಲ ತೀರಿಸಲಾಗದ ಹತಾಶೆಯಿಂದ ಉದ್ಯಮಿಯೊಬ್ಬರು ತನ್ನ ಪತ್ನಿ ಮತ್ತು ಅವಳಿ-ಜವಳಿ ಮಕ್ಕಳನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೈಸೂರಿನ ವಿಜಯನಗರ ವಾಣಿ ವಿಲಾಸ  ಬಡಾವಣೆಯ ನಿವಾಸಿ ಉದ್ಯಮಿ ದೇವೇಂದ್ರ (48) ಎಂಬವರು ತನ್ನ ಪತ್ನಿ  ನಿರ್ಮಲಾ (45) ಮತ್ತು ಅವಳಿ-ಜವಳಿ ಪುತ್ರಿಯರಾದ ಚೈತ್ರಾ (9) ಹಾಗೂ ಚೈತನ್ಯಾ (9) ಅವರಿಗೆ ವಿಷವುಣಿಸಿ ಅಥವಾ ಕತ್ತು ಹಿಸುಕಿ ಕೊಂದು, ಬಳಿಕ ತಾನು ನೇಣುಬಿಗಿದು ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ.

ಘಟನೆಯ ವಿವರ: ದೇವೇಂದ್ರ ಮೈಸೂರಿನಲ್ಲಿ ಅಟೋಮೊಬೈಲ್ ಲೇತ್ ಉದ್ಯಮವನ್ನು ನಡೆಸುತ್ತಿದ್ದರು. ಉದ್ಯಮದ ವೃದ್ಧಿಗೆ ಸಾಕಷ್ಟು ಸಾಲವನ್ನು ಮಾಡಿದ್ದ ದೇವೇಂದ್ರ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾದ ಕಾರಣ ತುಂಬಾ ಹತಾಶೆಯಲ್ಲಿದ್ದರು ಎನ್ನಲಾಗಿದೆ. ದೇವೇಂದ್ರ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮಾ.27ರಂದು ಮಂಗಳೂರಿಗೆ ಆಗಮಿಸಿ ನಗರದ ಕೆ.ಎಸ್. ರಾವ್ ರಸ್ತೆಯ ಲಾಡ್ಜ್‌ನಲ್ಲಿ ರೂಂ ಪಡೆದು ಮಾ.30ರ ಸಂಜೆ ತೆರವು ಮಾಡುವುದಾಗಿ ತಿಳಿಸಿದ್ದರು. ಆದರೆ ಗುರುವಾರ ಸಂಜೆಯಾದರೂ ತೆರಳದೆ ಅದೇ ರೂಂನಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ ಲಾಡ್ಜ್‌ನ ಸಿಬ್ಬಂದಿಯು ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಸೂಚನೆ ಬರಲಿಲ್ಲ. ಸಂಶಯಗೊಂಡ ಸಿಬ್ಬಂದಿ ರೂಮಿನ ಇನ್ನೊಂದು ಕೀಯನ್ನು ಬಳಸಿ ಬಾಗಿಲು ತೆರೆದಾಗ ನಾಲ್ವರು ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೇವೇಂದ್ರರ ಕುಟುಂಬಸ್ಥರು ಮೈಸೂರಿನಿಂದ ಮಂಗಳೂರಿಗೆ ಆಗಮಿಸಿ ಲಾಡ್ಜ್‌ನಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಪೊಲೀಸರು ಅವರ ಸಮ್ಮುಖ ಮೃತದೇಹದ ಮಹಜರು ಮಾಡಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ನಗರದ ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಅಂಶುಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್, ಬಂದರು ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮದುವೆಯಾಗಿ ಇಪ್ಪತ್ತು ವರ್ಷಗಳಾದರೂ ಮಕ್ಕಳಾಗದ ಚಿಂತೆಯಲ್ಲಿದ್ದರು. ಚಿಕಿತ್ಸೆಯ ಬಳಿಕ ಅವಳಿ ಹೆಣ್ಣು ಮಕ್ಕಳು ಹುಟ್ಟಿದ್ದು ತುಂಬಾ ಸಂತೋಷದಲ್ಲಿದ್ದರು. ಅಣ್ಣ ಮತ್ತು ಅತ್ತಿಗೆ ತುಂಬಾ ಅನ್ಯೋನ್ಯವಾಗಿದ್ದರು. ಇತ್ತಿಚೆಗಷ್ಟೇ ಮಕ್ಕಳ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸಿದ್ದರು. ದೇವೇಂದ್ರ ಮೈಸೂರಿನಲ್ಲಿ ಲೇತ್ ಹಾಗೂ ಷಟರ್ ಫ್ಯಾಕ್ಟರಿ ಹೊಂದಿದ್ದು, ಆತನ ಕೈಕೆಳಗೆ 8 ಮಂದಿ ಕೆಲಸ ಮಾಡುತ್ತಿದ್ದರು. ಅವರಿಗೆ ಆರ್ಥಿಕ ಸಂಕಷ್ಟ ಇರುವ ಬಗ್ಗೆ ನಮಗೆ ಹೇಳಿರಲಿಲ್ಲ ಎಂದು ಮೃತ ದೇವೇಂದ್ರರ ಸಹೋದರ ರವಿ ಹೇಳಿದ್ದಾರೆ.

ಕಳೆದ 15ದಿನಗಳಿಂದ ಫ್ಯಾಕ್ಟರಿಗೆ ಬಂದಿರಲಿಲ್ಲ. ಫ್ಯಾಕ್ಟರಿಗೆ ಕೆಲವರು ಬರುತ್ತಾ ಇದ್ದರು. ಆದರೆ ಯಾಕೆ ಬರುತ್ತಿದ್ದರು ಅಂತ ಗೊತ್ತಾಗುತ್ತಿರಲಿಲ್ಲ. ಫ್ಯಾಕ್ಟರಿ ನಷ್ಟದಲ್ಲಿದ್ದು, ಕೆಲವೇ ಸಮಯದಲ್ಲಿ ಎಲ್ಲಾ  ಸರಿ ಆಗಬಹುದು ಅಂತ ಹೇಳಿದ್ದ. ಇವತ್ತು ಮುಂಜಾನೆ  ಫ್ಯಾಕ್ಟರಿ ಓಪನ್ ಮಾಡಿದಾಗ ಆತ್ಮಹತ್ಯೆಯ ಸುದ್ದಿ ತಿಳಿದು ಆಘಾತಕ್ಕೀಡಾದೆ ಎಂದು ರವಿ ನುಡಿದರು.

Similar News