ಅಪೂರ್ವ ಧೈರ್ಯ ಪ್ರದರ್ಶಿಸಿದ್ದೀರಿ, ಇಡೀ ದೇಶ ನಿಮ್ಮ ಜತೆಗಿದೆ: ಸತ್ಯಪಾಲ್ ಮಲಿಕ್ ಬೆಂಬಲಕ್ಕೆ ನಿಂತ ಕೇಜ್ರಿವಾಲ್

Update: 2023-04-22 02:58 GMT

ಹೊಸದಿಲ್ಲಿ: ವಿಮಾ ಹಗರಣದಲ್ಲಿ ವಿಚಾರಣೆಗಾಗಿ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದ ಬೆನ್ನಲ್ಲೇ, "ಭೀತಿಯ ವಾತಾವರಣದಲ್ಲಿ ಅಮೋಘ ಧೈರ್ಯ ಪ್ರದರ್ಶಿಸಿದ್ದೀರಿ" ಎಂದು ದಿಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಮಲಿಕ್ ಅವರ ಗುಣಗಾನ ಮಾಡಿದ್ದಾರೆ.

ಮಲಿಕ್ ಅವರು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ವಿಮಾ ಹಗರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿತ್ತು.

"ಇಡೀ ದೇಶ ನಿಮ್ಮ ಜತೆಗಿದೆ. ಭಯದ ವಾತಾವರಣದಲ್ಲೂ ನೀವು ಅಮೋಘ ಧೈರ್ಯ ಪ್ರದರ್ಶಿಸಿದ್ದೀರಿ. ಆತ ಹೇಡಿ; ಸಿಬಿಐ ಹಿಂದೆ ಅಡಗಿಕೊಂಡಿದ್ದಾನೆ. ಶ್ರೇಷ್ಠ ಭಾರತದಲ್ಲಿ ಯಾವಾಗ ಇಂಥ ಬಿಕ್ಕಟ್ಟು ತಲೆದೋರಿತ್ತೋ ಅಂಥ ಸಂದರ್ಭದಲ್ಲಿ ನಿಮ್ಮಂತವರು ಧೈರ್ಯದಿಂದ ಅದನ್ನು ಎದುರಿಸಿದ್ದಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

"ಆತ ಅನಕ್ಷರಸ್ಥ, ಭ್ರಷ್ಟ ಹಾಗೂ ದೇಶದ್ರೋಹಿ. ನಿಮಗೆ ಸಾಟಿಯಾಗಲಾರ. ನೀವು ಮುನ್ನುಗ್ಗಿ ಸರ್, ನಿಮ್ಮ ಬಗ್ಗೆ ಹೆಮ್ಮೆ ಇದೆ" ಎಂದು ಎಎಪಿ ವರಿಷ್ಠ ಯಾರದೇ ಹೆಸರು ಉಲ್ಲೇಖಿಸದೇ ಮಲಿಕ್ ಅವರನ್ನು ಬೆಂಬಲಿಸಿದ್ದಾರೆ.

Similar News