×
Ad

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಕಾಂಗ್ರೆಸ್ 5ನೇ ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ

''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಥಮ ಕ್ಯಾಬಿನೆಟ್ ಅಧಿವೇಶನದಲ್ಲಿ ಭರವಸೆ ಈಡೇರಿಸಲು ಕ್ರಮ''

Update: 2023-04-27 20:08 IST

ಮಂಗಳೂರು: ರಾಜ್ಯ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಥಮ ಕ್ಯಾಬಿನೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನೀಡಿದ 4 ಭರವಸೆ ಮತ್ತು ರಾಜ್ಯದ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ಈಡೇರಿಸಲು ಕ್ರಮಕೈಗೊಳ್ಳಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಕರಾವಳಿಯ ಕಾಪುವಿಗೆ ಆಗಮಿಸಿದ ರಾಹುಲ್ ಗಾಂಧಿ ಅಲ್ಲಿನ ಮೀನುಗಾರರ ಜೊತೆಗಿನ ಸಂವಾದದಲ್ಲಿ ಭಾಗವಹಿಸಿ ನಂತರ ಅಡ್ಯಾರ್  ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಎದುರಿನ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರ ರಚಿಸಿದೆ. ಭ್ರಷ್ಟಾಚಾರದ ಮೂಲಕ ಅಧಿಕಾರ ಪಡೆದ ಬಿಜೆಪಿ ಎಲ್ಲಾ ಕ್ಷೇತ್ರದಲ್ಲಿಯೂ ಶೇ.40 ಕಮೀಷನ್ ಪಡೆದಿದೆ. ಮಠದ ಕಾಮಗಾರಿಯಲ್ಲಿ ಶೇ. 30 ಕಮೀಷನ್ ಪಡೆದು ಕಾಮಗಾರಿ ನಡೆಸಿದ್ದಾರೆ ಎನ್ನುವ ಬಗ್ಗೆ ಕರ್ನಾಟಕದ ಜನ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಬೆಲೆ ಏರಿಕೆ, ದೇಶದಲ್ಲಿ 40 ಕೋಟಿ ಜನ ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ. ಶೇ ಒಂದರಷ್ಟು ಜನರಲ್ಲಿ ಶೇ 40 ಸಂಪತ್ತು ಶೇಖರಣೆಯಾಗಿದೆ. 90ಲಕ್ಷ ಸಣ್ಣ ಕೈಗಾರಿಕೆಗಳು ಸಂಪೂರ್ಣ ಮುಚ್ಚಿದೆ. 1.4 ಲಕ್ಷ ಜನ ಉದ್ಯೋಗ ಕಳೆದುಕೊಂಡರು. ಮೋದಿ ಜನರಿಗೆ ನೀಡಿದ ಭರವಸೆ ಈಡೇರಿಸಿಲ್ಲ ಆದರೆ ಅದಾನಿಗೆ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮಂಗಳೂರು ನೆನಪಿಸಿದ ರಾಹುಲ್ :- ಇಂದಿರಾ ಗಾಂಧಿ ಮಂಗಳೂರು  ವಿಮಾನ ನಿಲ್ದಾಣ, ಬಂದರು ಎಂಸಿಎಫ್ ನಂತಹ ಕಾರ್ಖಾನೆಯನ್ನು ಇಲ್ಲಿ ಸ್ಥಾಪನೆ ಮತ್ತು ಅಭಿವೃದ್ಧಿ ಮಾಡಿರುವುದು ನನಗೆ ಗೊತ್ತಿದೆ. ಇಲ್ಲಿನ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಕೊಡುಗೆ ನೀಡಿದ್ದಾರೆ. ಇಂತಹ ಬ್ಯಾಂಕ್ ಗಳನ್ನು ಮೋದಿ ಸರಕಾರ ವಿಲೀನಗೊಳಿಸಿದೆ. ವಿಮಾನ ನಿಲ್ದಾಣ ವನ್ನು ಅದಾನಿಗೆ ನೀಡಿ ಇಲ್ಲಿನ ಜನರನ್ನು ನಿರ್ಲಕ್ಷಿಸಿ ದೆ ಎಂದರು.

*ಬಿಜೆಪಿ 40 ಪರ್ಸೆಂಟ್ ಸರಕಾರ ಅವರಿಗೆ ಈ ಬಾರಿ ಕೇವಲ 40 ಸೀಟ್ ಮಾತ್ರ ನೀಡಿ. ಕಾಂಗ್ರೆಸ್ ಗೆ 150 ಸೀಟ್ ನಲ್ಲಿ ಜಯಗಳಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.

* ಕರಾವಳಿಯ ಸೌಹಾರ್ದತೆಯನ್ನು ಕದಡಿದ ಕೋಮುವಾದಿ ಪಕ್ಷ ಬಿಜೆಪಿ ಯನ್ನು ಸೋಲಿಸಿ ಕರಾವಳಿಯಲ್ಲಿ ಮತ್ತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸ ಬೇಕಾಗಿದೆ. ಇಲ್ಲಿನ ಭ್ರಷ್ಟಾಚಾರ ವನ್ನು ಕೊನೆಗೊಳಿಸಲು ಕಾಂಗ್ರೆಸ್ ನ್ನು ಬೆಂಬಲಿಸಿ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

*ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಬಿಜೆಪಿ ಯನ್ನು ಬೆಂಬಲಿಸಿದವರಿಗೂ ಬಿಜೆಪಿ ನೆರವು ನೀಡಿಲ್ಲ. ರೈತರ ಬದುಕಿನಲ್ಲಿ ಬದಲಾವಣೆಯಾಗಿಲ್ಲ. ಅನೇಕ ನಾಯಕರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರು ದಡ್ಡರಲ್ಲ. ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ಕೆಲಸ ಆಗ್ತಾ ಇಲ್ಲ. ಹೂಡಿಕೆ ಆಗ್ತಾ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿಗೆ ಪ್ರತ್ಯೇಕವಾಗಿ ಬಜೆಟ್ ನಲ್ಲಿ ಯೋಜನೆ ರೂಪಿಸಲಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನ ಮಾಡುವ ಭರವಸೆ ನೀಡುತ್ತೇನೆ. ಈ ಪ್ರಕಾರ ನುಡಿದಂತೆ ನಡೆಯದಿದ್ದರೆ ಇನ್ನೊಂದು ಬಾರಿ ಮತಯಾಚಿಸುವುದಿಲ್ಲ. ರಾಜ್ಯದ 40 ಪರ್ಸೆಂಟ್ ಸರಕಾರದ ಆಡಳಿತ ಕೊನೆಗೊಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್ ,ಬಿ.ಕೆ.ಹರಿಪ್ರಸಾದ್, ಮಂಜುನಾಥ ಭಂಡಾರಿ, ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವರಾದ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ  ಕೆ.ಸಿ.ವೇಣುಗೋಪಾಲ, ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಐವನ್ ಡಿ ಸೋಜ, ಬಿ.ಇಬ್ರಾಹಿಂ, ಮುಖಂಡರಾದ ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಕೃಪಾ ಅಮ ರ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಬಡಗನ್ನೂರು ಮುಹಮ್ಮದ್ ಕಾರ್ಯ ಕ್ರಮ ನಿರೂಪಿಸಿದರು.

Similar News