ಜಾರ್ಖಂಡ್: ಬಿಜೆಪಿ ನಾಯಕನ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
Update: 2023-04-27 18:29 GMT
ಮೇಧಿನಿನಗರ್, ಎ. 27: ಬಿಜೆಪಿ ನಾಯಕರೋರ್ವರ ಮೃತದೇಹ ಜಾರ್ಖಂಡ್ನ ಪಾಲಮು ಜಿಲ್ಲೆಯ ಗ್ರಾಮವೊಂದರ ನಿರ್ಜನ ಪ್ರದೇಶದಲ್ಲಿರುವ ಮರದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮನಾತು ಮಂಡಲದ ಬಿಜೆಪಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಪ್ರಮೋದ್ ಸಿಂಗ್ (35) ಮೃತದೇಹ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ತುತಿ ತಿಳಿಸಿದ್ದಾರೆ.
ಸಿಂಗ್ ಅವರು ಬುಧವಾರ ಸಂಜೆ 5 ಗಂಟೆಗೆ ಮನೆಯಿಂದ ತೆರಳಿದ್ದರು. ಅನಂತರ ನಾಪತ್ತೆಯಾಗಿದ್ದರು ಎಂದು ಅವರು ಹೇಳಿದ್ದಾರೆ. ಭೂವಿವಾದಕ್ಕೆ ಸಂಬಂಧಿಸಿ ಅವರನ್ನು ಹತ್ಯೆಗೈಯಲಾಗಿದೆ ಹಾಗೂ ಆತ್ಮಹತ್ಯೆಯ ಕಥೆ ಕಟ್ಟಲು ಅವರನ್ನು ಮರಕ್ಕೆ ನೇಣು ಹಾಕಲಾಗಿದೆ ಎಂದು ಸಿಂಗ್ ಅವರ ಕುಟುಂಬ ಆರೋಪಿಸಿದೆ.