ಕಡಬ: ಕೊಂಬಾರು ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕಾಡಾನೆ ಮೃತ್ಯು
Update: 2023-04-28 12:24 IST
ಉಪ್ಪಿನಂಗಡಿ, ಎ.28: ಅನಾರೋಗ್ಯಕ್ಕೊಳಪಟ್ಟು ಕಡಬ ತಾಲೂಕಿನ ಕೊಂಬಾರು ಪ್ರದೇಶದಲ್ಲಿ ಸುತ್ತಾಡುತ್ತಿದ್ದ ಕಾಡಾನೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ ಜಾವ ಮೃತಪಟ್ಟಿದೆ.
ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಸುತ್ತಮುತ್ತ ಓಡಾಟ ನಡೆಸುತ್ತಿದ್ದ ಈ ಅಸ್ವಸ್ಥ ಗಂಡು ಕಾಡಾನೆ ಬಳಿಕ ಕೊಂಬಾರು ಗ್ರಾಮದ ಮಣಿಬಾಂಡ ಸಮೀಪದ ಓಟೆಹೊಳೆ ಎಂಬಲ್ಲಿ ಹಳ್ಳದ ನೀರಿನಲ್ಲಿ ಕಾಣಿಸಿಕೊಂಡಿತ್ತು. ಇದು ಅಸ್ವಸ್ಥಗೊಂಡಿರುವುದು ಗೊತ್ತಾಗಿ ಅರಣ್ಯ ಇಲಾಖೆಯವರು ಒಂದು ವಾರದಿಂದಲೇ ಇದರ ಬಗ್ಗೆ ನಿಗಾವಿಟ್ಟಿದ್ದು, ನಾಗರಹೊಳೆಯಿಂದ ಬಂದ ವೈದ್ಯರ ತಂಡ ಇದಕ್ಕೆ ಚಿಕಿತ್ಸೆಯನ್ನು ನೀಡಿತ್ತು. ಬಳಿಕವೂ ಅದು ಆ ಪ್ರದೇಶದಲ್ಲಿ ಅಲ್ಲಿ- ಇಲ್ಲಿ ಸುತ್ತಾಡಿಕೊಂಡಿತ್ತು. ಆದರೆ ಇಂದು ನಸುಕಿನ ಜಾವ ಅದು ಮೃತಪಟ್ಟಿದೆ ಎನ್ನಲಾಗಿದೆ.