×
Ad

ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಅಂತರ್ಜಲ ನಿಕ್ಷೇಪಗಳ ಪತ್ತೆ: ಮಣಿಪಾಲದ ಸಂಶೋಧಕರಿಂದ ಅನ್ವೇಷಣೆ

Update: 2023-05-02 19:02 IST

ಉಡುಪಿ, ಮೇ 2: ಉಡುಪಿ ಜಿಲ್ಲೆಯ ಬೀಜಾಡಿ, ಕಾಪು, ಮಲ್ಪೆ, ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ದೊಡ್ಡ ಪ್ರಮಾಣದಲ್ಲಿ, ಅಂತರ್ಜಲವು ಒರತೆಯ ರೂಪದಲ್ಲಿ ಅರಬ್ಬೀ ಸಮುದ್ರ ದೆಡೆಗೆ ಹೊರಸೂಸುವುದನ್ನು ಮಣಿಪಾಲದ ಸಂಶೋಧಕರ ತಂಡವೊಂದು ಪತ್ತೆ ಮಾಡಿ ವರದಿ ಮಾಡಿದೆ.  

ಮಣಿಪಾಲ ಎಂಐಟಿ  ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಬಾಲಕೃಷ್ಣ, ಡಾ. ಎಚ್.ಎನ್. ಉದಯಶಂಕರ್ ಹಾಗೂ ಸಂಶೋಧನಾ ವಿದ್ಯಾರ್ಥಿ ಲಿನೊ ಯೋವನ್ ನೇತೃತ್ವದ ಸಂಶೋಧನಾ ತಂಡ ಇದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಅವರ ಸಂಶೋಧನೆಯು ನೆದರ್ಲ್ಯಾಂಡ್ ಮೂಲದ ಎಲ್ಸೆಯರ್ ಪ್ರಕಟಿತ ವೈಜ್ಞಾನಿಕ ನಿಯತಕಾಲಿಕ ಜರ್ನಲ್ ಆಫ್ ಹೈಡ್ರಾಲಜಿಯ ಮೇ 2023ರ ಸಂಚಿಕೆಯಲ್ಲಿ ಪ್ರಕಟವಾಗುತ್ತಿದೆ.

(ಪೂರ್ಣಲೇಖನ ಜಾಲತಾಣದಲ್ಲಿ ಲಭ್ಯ: https://doi.org/10.1016/j.jhydrol.2023.129394

ಉಡುಪಿ ಜಿಲ್ಲೆಯಲ್ಲಿ ನೀರಿನ ಸಂಪನ್ಮೂಲಗಳು ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಈ ಸಂಶೋಧನೆ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಸಮುದ್ರ ತೀರದಲ್ಲಿ ಕಾಣಸಿಗುವ ಈ ಒರತೆಯು, ತಾಜಾ ಅಂತರ್ಜಾಲದ ಸಂಭಾವ್ಯ ಮೂಲವಾಗಿದ್ದು ಸಮುದ್ರದ ಪಾಲಾಗುತ್ತಿದೆ. 

ಈ ಸಿಹಿ ನೀರಿನ ಒಂದು ಭಾಗವನ್ನು ಸುಸ್ಥಿರವಾಗಿ ನಿಯಂತ್ರಿತ ರೀತಿಯಲ್ಲಿ ಕುಡಿಯುವ ನೀರಾಗಿ ಬಳಸಲು ಸಾಧ್ಯವಾದಲ್ಲಿ, ನೀರಿನ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸಬಹುದಾಗಿದೆ. ನದಿಗಳು ನೀರನ್ನು ಸಾಗರಕ್ಕೆ ಪ್ರವಹಿಸುವಂತೆ ಭೂಮಿಯಡಿಯಲ್ಲಿ ಹುದುಗಿರುವ ಅಂತರ್ಜಲವು ನದಿಗಳು ಪ್ರವಹಿಸಿದ ಶೇ.10ರಷ್ಟು ಸಿಹಿ ನೀರನ್ನು ಸಾಗರದೆಡೆಗೆ ಪ್ರವಹಿಸುವುದನ್ನು ಇತರೆಡೆ ನಡೆದ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.

ಆದರೂ, ಭಾರತದ ಸುಮಾರು 7500 ಕಿ.ಮಿ. ಉದ್ದದ ಕರಾವಳಿ ಯಾದ್ಯಂತ, ಇಂತಹ ಯಾವುದೇ ಸಂಶೋಧನೆಗಳು ನಡೆದಿರುವ ಬಗ್ಗೆ ವರದಿಯಾಗದಿರುವುದು ಗಮನಾರ್ಹ. ಇದರ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತ ಸರಕಾರದ ಭೂವಿಜ್ಞಾನ ಸಚಿವಾಲಯ ತಿರುವನಂತಪುರದ ರಾಷ್ಟ್ರೀಯ ಭೂವಿಜ್ಞಾನ ಅಧ್ಯಯನ ಕೇಂದ್ರಕ್ಕೆ (ಎನ್‌ಸಿಇಎಸ್‌ಎಸ್) ಈ ಜವಾಬ್ದಾರಿಯನ್ನು ವಹಿಸಿದೆ. ಎಂಐಟಿ ಮಣಿಪಾಲ ಈ ಸಂಸ್ಥೆಯ ಪ್ರಮುಖ ಪಾಲುದಾರರಾಗಿದ್ದು, ಉಡುಪಿ- ಉತ್ತರಕನ್ನಡ ಕರಾವಳಿಯ ನಿಕ್ಷೇಪಗಳ ಪತ್ತೆ ಕಾರ್ಯವನ್ನು ಪ್ರಕೃತ ನಡೆಸುತ್ತಿದೆ.

ಈ ಸಂಶೋಧನ ವರದಿಯ ಅಗ್ರ ಲೇಖಕರಾದ ಲಿನೊ ಯೋವನ್ ಅಭಿಪ್ರಾಯದಂತೆ, ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿ ಹೊರಸೂಸಲ್ಪಡುತ್ತಿರುವ ಗಮನಾರ್ಹ ಪ್ರಮಾಣದ ಅಂತರ್ಜಲವು ಇಲ್ಲಿ ಬೀಳುತ್ತಿರುವ ಭಾರೀ ಮಳೆ ಹಾಗೂ ಈ ಪ್ರದೇಶದ ಭೂಮೇಲ್ಮೆಯಲ್ಲಿ ಹರಡಿರುವ ಸುಮಾರು 40000 ವರ್ಷ ಹಳೆಯ ಜಲಭರಿತ ಮಡ್ಡಿಯ ನಿಕ್ಷೇಪಗಳಿಂದ ಸಾಧ್ಯವಾಗಿದೆ.

ಈ ವಿಶೇಷ ಮಡ್ಡಿಯು ಗಣನೀಯ ಪ್ರಮಾಣದ ಮಳೆನೀರನ್ನು ತನ್ನೊಡನೆ ಹುದುಗಿಸಿ, ಸಮುದ್ರದೆಡೆಗೆ ಪ್ರವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರಮಾಣದ ಅಂತರ್ಜಲ ಹೊರಸೂಸುವಿಕೆಯಿಂದ ಈ ಪ್ರದೇಶಗಳನ್ನು ಸಂಭಾವ್ಯ ಉಪ್ಪು ನೀರು ಒಳನುಗ್ಗುವಿಕೆಯಿಂದ ರಕ್ಷಿಸುತ್ತದೆ. 

ಇನ್ನೊಂದು ಕೋನದಲ್ಲಿ ಈ ವಿದ್ಯಮಾನವನ್ನು ಗಮನಿಸುವುದಾದರೆ, ಈ ಅಂತರ್ಜಲವು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಅರಬ್ಬೀ ಸಮುದ್ರಕ್ಕೆ ಪ್ರವಹಿಸುತ್ತದೆ. ಈ ಪೋಷಕಾಂಶಗಳು ಕೃಷಿಗೆ ಬಳಸುವ ರಸಗೊಬ್ಬರಗಳಿಂದ ಅಂತರ್ಜಲಕ್ಕೆ ಸೇರುತ್ತದೆ. ಹೀಗೆ ಸಾಗರಕ್ಕೆ ಪ್ರವಹಿಸುವ ಪೋಷಕಾಂಶಗಳು ಸಮುದ್ರವನ್ನು ಫಲವತ್ತಾಗಿಸಿ, ಪಾಚಿ ಪ್ರಸರಣ ವೃದ್ಧಿ ಹಾಗೂ ಕಡಿಮೆ ಮೀನು ಇಳುವರಿಗೆ ಕಾರಣವಾಗಬಹುದು. 

ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಸಮುದ್ರಕ್ಕೆ ಪ್ರವಹಿಸುತ್ತಿದ್ದರೂ ಅದನ್ನು ಸುಸ್ಥಿರ ಪ್ರಮಾಣದಲ್ಲಿ ಹೊರತೆಗೆಯು ವುದರ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿವೆ ಎಂದು ವರದಿಯಲ್ಲಿ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. 

Similar News