ಮಂಗಳೂರು: ಕೈದಿಗಳಿಗೆ ಗಾಂಜಾ ಪೂರೈಕೆ ಪ್ರಕರಣ; ಆರೋಪಿಗೆ ಜೈಲು ಶಿಕ್ಷೆ, ದಂಡ
Update: 2023-05-04 20:54 IST
ಮಂಗಳೂರು: ನಗರದ ಕೋಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣಾಧೀನ ಕೈದಿಗಳನ್ನು ಕರೆದುಕೊಂಡು ಹೋಗುವ ವೇಳೆ ಅವರಿಗೆ ಗಾಂಜಾ, ನಗದು, ಮೊಬೈಲ್ ಫೋನ್ ನೀಡಲು ಯತ್ನಿಸಿದ್ದ ಆರೋಪಿ ಸಂದೀಪ್ ಎಂಬಾತನಿಗೆ ಜೆಎಂಎಫ್ಸಿ 2ನೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿವೆ.
2018ರ ಜೂನ್ 6ರಂದು ಆರೋಪಿಯು ಕೈದಿಗಳಿಗೆ 38 ಗ್ರಾಂ ಗಾಂಜಾವನ್ನು ನೀಡಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಪಡೆದ ಅಂದಿನ ಎಸ್ಸೈ ಪ್ರದೀಪ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಅಲ್ಲದೆ ಆತನಿಂದ ಮೊಬೈಲ್ ಮತ್ತು ಹಣವನ್ನು ವಶಪಡಿಸಿಕೊಂಡಿದ್ದರು. ಬಳಿಕ ಎಸ್ಸೈ ಸುಂದರ್ ಎಂಬವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದೀಗ ಆರೋಪಿ ಸಂದೀಪ್ಗೆ 6 ತಿಂಗಳು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಗೀತಾ ರೈ ವಾದಿಸಿದ್ದರು.