ಜನಾದೇಶಕ್ಕೆ ತಲೆಬಾಗೋಣ

Update: 2023-05-13 03:33 GMT

ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದ ಬೆನ್ನಿಗೇ ಸರಕಾರ ರಚನೆಯ ಕುರಿತಂತೆ ಪಕ್ಷಗಳ ನಾಯಕರು ತಲೆಗೊಂದರಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ‘ಬಹುಮತ ನಮ್ಮದೇ’ ಎಂದು ಪಟ್ಟು ಹಿಡಿದು ಕೂತಿವೆ. ಪಕ್ಷಗಳ ಗೆಲುವಿಗೆ ಸಂಬಂಧಿಸಿ ಗಂಟೆಗೊಂದು ಸಮೀಕ್ಷೆಗಳು ಹೊರ ಬೀಳುತ್ತಿವೆ. ಹೆಚ್ಚಿನ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಪರವಾಗಿವೆ. ಎಲ್ಲ ವದಂತಿಗಳಿಗೂ ಮೇ 13 ತೆರೆ ಎಳೆಯಲಿದೆ. ಪಕ್ಷಗಳ ನಿಜವಾದ ಬಲಾಬಲಗಳು ಇಂದು ಘೋಷಣೆಯಾಗಲಿದೆ. ಹೊರ ಬೀಳುವ ಫಲಿತಾಂಶವನ್ನು ಪಕ್ಷಗಳು ಹೇಗೆ ಸ್ವೀಕರಿಸಲಿವೆ ಎನ್ನುವುದರ ಆಧಾರದ ಮೇಲೆ ಈ ನಾಡಿನ ಭವಿಷ್ಯ ನಿಂತಿದೆ. ಈ ಹಿಂದೆಲ್ಲ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಅಕ್ರಮಗಳು, ಹಣ ಹಂಚುವಿಕೆಗೆ ಸುದ್ದಿಯಾಗುತ್ತಿದ್ದವು. ಮತದಾರರನ್ನು ಹಣ, ಹೆಂಡಗಳ ಮೂಲಕ ಕೊಂಡುಕೊಂಡು ಜನಪ್ರತಿನಿಧಿಗಳು ಆಯ್ಕೆಯಾಗುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಚರ್ಚೆಗೆ ಬರುತ್ತಿತ್ತ್ತು. ಆದರೆ ಇಂದು ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಒಂದೆಡೆ ಮತದಾರರನ್ನು ಖರೀದಿಸಿ ಜನಪ್ರತಿನಿಧಿ ಆಯ್ಕೆಯಾದರೆ, ಹಾಗೆ ಆಯ್ಕೆಯಾದ ಜನಪ್ರತಿನಿಧಿಯನ್ನೇ ಖರೀದಿಸಿ ಸರಕಾರ ರಚಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಭಾರೀ ಅಕ್ರಮವನ್ನು ‘ಚಾಣಕ್ಯ ತಂತ್ರ’ವೆಂದು ಮಾನ್ಯ ಮಾಡಲಾಗಿದೆ.   ಒಂದು ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಶಾಸಕನೊಬ್ಬನನ್ನು ಖರೀದಿಸಿ, ಆ ಬಳಿಕ ಆ ಶಾಸಕರ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆಯನ್ನು ಹೇರುವ ಪ್ರಜಾಪ್ರಭುತ್ವದ ಅತ್ಯಂತ ಭೀಕರವಾದ ಅಣಕವೊಂದು ಕರ್ನಾಟಕದಲ್ಲಿ ನಡೆಯುತ್ತಾ ಬರುತ್ತಿದೆ. ಈ ನಾಡಿನ ಮತದಾರರೂ ಆ ಅಕ್ರಮದಲ್ಲಿ ನೇರ ಭಾಗಿಯಾಗಿದ್ದಾರೆ. ಇಲ್ಲವಾದರೆ, ಹೇರಲ್ಪಡುವ ಮರು ಚುನಾವಣೆಯಲ್ಲಿ ಖರೀದಿಯಾದ ಶಾಸಕನನ್ನೇ ಮತದಾರರು ಮತ್ತೊಮ್ಮೆ ಯಾಕೆ ಚುನಾಯಿಸುತ್ತಿದ್ದರು?

ಈ ಬಾರಿ ಬಿಜೆಪಿಯ ಕೆಲವು ಮುಖಂಡರು ‘ಬಹುಮತ ಖಚಿತ’ ಎಂಬ ಹೇಳಿಕೆ ನೀಡುತ್ತಿದ್ದರೆ, ಕೆಲವರು ‘ಆಪರೇಷನ್ ಕಮಲ’ದ ಮೂಲಕ ಮತ್ತೆ ಅಧಿಕಾರ ಹಿಡಿಯುವ ಬಗ್ಗೆ ಯಾವ ಲಜ್ಜೆಯೂ ಇಲ್ಲದೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿಂದೆಲ್ಲ, ‘ಫಲಿತಾಂಶಕ್ಕೆ ತಲೆಬಾಗುತ್ತೇವೆ’ ‘ಜನಾದೇಶವನ್ನು ಗೌರವಿಸುತ್ತೇವೆ’ ‘ಬಹುಮತ ಸಿಗದೇ ಇದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೊಳ್ಳುತ್ತೇವೆ’ ಎನ್ನುವ ಹೇಳಿಕೆಯನ್ನು ನೀಡಿ ಚುನಾವಣಾ ಫಲಿತಾಂಶವನ್ನು ಸ್ವೀಕರಿಸುತ್ತಿದ್ದರು. ಇಂತಹ ಹೇಳಿಕೆಗಳಿಂದ ಪಕ್ಷಗಳ ನಾಯಕರು ಗೌರವಕ್ಕೆ ಪಾತ್ರರಾಗುತ್ತಿದ್ದರು. ಪ್ರಜಾಸತ್ತೆಯ ಮೇಲೆ ನಂಬಿಕೆಯಿಲ್ಲದ ನಾಯಕ ಮಾತ್ರ ‘‘ನಾವು ಬೇರೆ ಮಾರ್ಗದಲ್ಲಿ ಅಧಿಕಾರವನ್ನು ಹಿಡಿಯುತ್ತೇವೆ’’ ಎನ್ನುವಂತಹ ಹೇಳಿಕೆಯನ್ನು ನೀಡಲು ಸಾಧ್ಯ. ಇದೀಗ ಫಲಿತಾಂಶ ಘೋಷಣೆಗೆ ಮುನ್ನವೇ ಬಿಜೆಪಿಯ ನಾಯಕರು ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಬಿಜೆಪಿ ಪರ ನಾಯಕ ಲಖನ್ ಜಾರಕಿ ಹೊಳಿ ‘‘25 ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ. ನಾವು ಸರಕಾರ ರಚಿಸಲಿದ್ದೇವೆ’’ ಎನ್ನುವಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದಾರೆ. ಇದರ ಬೆನ್ನಿಗೇ ಬಿಜೆಪಿ ನಾಯಕ ಆರ್. ಅಶೋಕ್ ‘‘ಬಹುಮತ ಪಡೆಯದೇ ಇದ್ದರೆ ಪ್ಲ್ಯಾನ್ ಬಿ ಸಿದ್ಧವಿದೆ’’ ಎಂದು ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಿಯಾದರೂ ಅಧಿಕಾರ ಹಿಡಿದೇ ಸಿದ್ಧ ಎಂದು ಬೆದರಿಕೆ ಒಡ್ಡಿದ್ದಾರೆ. ಮೇಲ್ನೋಟಕ್ಕೆ ಈ ಬೆದರಿಕೆ ಕಾಂಗ್ರೆಸ್ ಪಕ್ಷಕ್ಕೆ ಎಂಬಂತೆ ಭಾಸವಾದರೂ, ಅವರು ಸವಾಲು ಹಾಕಿರುವುದು ಚುನಾವಣಾ ವ್ಯವಸ್ಥೆಗೆ. ‘ಚುನಾವಣೆಯಲ್ಲಿ ಯಾವುದೇ ಫಲಿತಾಂಶ ಹೊರ ಬರಲಿ. ಸರಕಾರವನ್ನು ನಾವೇ ರಚಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗ  ಬಿಜೆಪಿ ನಾಯಕರ ಈ ಹೇಳಿಕೆಗಳಿಗೆ ಕಿವುಡಾಗಿ ಕುಳಿತಿದೆ.

ಚುನಾವಣೆ ನಡೆದ ಎರಡೇ ದಿನಗಳಲ್ಲಿ ಮತದಾರರ ಬೆನ್ನಿಗೆ ಚೂರಿ ಹಾಕುವಂತಹ ಹೇಳಿಕೆ ಇದು. ನಿಜಕ್ಕೂ ಚುನಾವಣೆಯಲ್ಲಿ ಗೆಲ್ಲುವ ಭರವಸೆಯಿದ್ದರೆ ‘ಆಪರೇಷನ್ ಕಮಲ’ದ ಅಗತ್ಯವೇನಿದೆ? ಎಂದು ಜನರು ಕೇಳುತ್ತಿದ್ದಾರೆ. ಒಂದು ವೇಳೆ ಬಹುಮತ ಸಿಗದೇ ಇದ್ದರೆ ಅದು ಜನರು ಆ ಪಕ್ಷಕ್ಕೆ ನೀಡಿದ ಸಂದೇಶವಾಗಿದೆ. ಆ ಜನಾದೇಶವನ್ನು ಗೌರವಿಸುವುದು ಕರ್ತವ್ಯ. ಜನಾದೇಶವನ್ನು ಗೌರವಿಸುವುದಿಲ್ಲ ಎಂದಾದರೆ ಚುನಾವಣೆಗೆ ನಿಲ್ಲುವ ಅಗತ್ಯವೇ ಇರಲಿಲ್ಲ. ಚುನಾವಣೆಯಲ್ಲಿ ಈಗಾಗಲೇ ಸಾವಿರಾರು ಕೋಟಿ ರೂ.ಗಳನ್ನು ನೀರಿನಂತೆ ಸುರಿದು ಇದೀಗ ‘25 ಶಾಸಕರನ್ನು ಖರೀದಿಸುತ್ತೇವೆ’ ಎನ್ನುವ ಬಿಜೆಪಿ ಪರೋಕ್ಷ ಹೇಳಿಕೆ ಏನನ್ನು ಹೇಳುತ್ತದೆ? ಈ ಬಾರಿಯ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯ ಮೇಲಿದ್ದ ದೊಡ್ಡ ಆರೋಪ ‘ಶೇ. 40 ಕಮಿಷನ್’. ಇದೀಗ ಬಿಜೆಪಿ ನಾಯಕರ ಆಪರೇಷನ್ ಕಮಲದ ಸಿದ್ಧತೆ, ಆ ಶೇ. 40 ಕಮಿಷನ್ ಆರೋಪವನ್ನು ಪುಷ್ಟೀಕರಿಸುತ್ತಿದೆ. ಬಿಜೆಪಿ ಸರಕಾರ ತನ್ನ ಅಧಿಕಾರಾವಧಿಯಲ್ಲಿ ಈ ನಾಡನ್ನು ದೋಚಿದ ಹಣದಿಂದಲೇ ಮತ್ತೊಮ್ಮೆ ಅಕ್ರಮ ದಾರಿಯಲ್ಲಿ ಸರಕಾರವನ್ನು ರಚಿಸಲು ಯೋಜನೆ ರೂಪಿಸುತ್ತಿದೆ ಎಂದು ನಾವು ಭಾವಿಸಬೇಕಾಗುತ್ತದೆ. ಒಂದು ವೇಳೆ ಅಂತಹ ‘ಬಿ ಪ್ಲ್ಯಾನ್’ನಲ್ಲಿ  ಬಿಜೆಪಿ ಯಶಸ್ವಿಯಾಯಿತು ಎಂದಾದರೆ, ನಾಡಿನ ಎಲ್ಲ ಮತದಾರರ ಎಡ ಗೈಯ ತೋರು ಬೆರಳು ಕತ್ತರಿಸಲ್ಪಟ್ಟಂತೆಯೇ ಸರಿ. ‘ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯದೇ ಇದ್ದರೆ ಪ್ರಜಾಸತ್ತೆಯನ್ನು ಹಾಡಹಗಲೇ ನಾವು ಕೊಂದು ಹಾಕುತ್ತೇವೆ’ ಎನ್ನುವ ಹೇಳಿಕೆಯನ್ನು ನೀಡಿರುವ ನಾಯಕರ ವಿರುದ್ಧ ಚುನಾವಣಾ ಆಯೋಗ ತಕ್ಷಣ ಸ್ವಯಂ ಪ್ರಕರಣ ದಾಖಲಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಇನ್ನೊಂದನ್ನು ನೆನಪಿನಲ್ಲಿಡಬೇಕು. ಎಲ್ಲಿಯವರೆಗೆ ಶಾಸಕರು ಮಾರಾಟಕ್ಕಿರುತ್ತಾರೋ ಅಲ್ಲಿಯವರೆಗೆ ಅವರನ್ನು ಖರೀದಿಸುವವರೂ ಇರುತ್ತಾರೆ. ಆದುದರಿಂದ ‘ಆಪರೇಷನ್ ಕಮಲ’ದಲ್ಲಿ ತಮ್ಮನ್ನು ತಾವು ಮಾರಾಟಕ್ಕಿಡುವ ವಿರೋಧಪಕ್ಷದ ಜನಪ್ರತಿನಿಧಿಗಳ ಪಾತ್ರವೂ ಇದೆ. ಚುನಾವಣೆಯಲ್ಲಿ ನಿಂತು, ಜನಪರ ಭರವಸೆಗಳ ಸುರಿಮಳೆಗೈದು ಜನರಿಂದ ಆಯ್ಕೆಯಾಗಿ ಬಳಿಕ ವಿರೋಧ ಪಕ್ಷಕ್ಕೆ ಮಾರಾಟವಾಗುವ ಶಾಸಕರು ಸಂವಿಧಾನದ ಶತ್ರುವಾಗಿದ್ದಾರೆ. ಇವರು ಅನಗತ್ಯ ಉಪಚುನಾವಣೆಗಳ ಹೇರಿಕೆಗೂ ಕಾರಣವಾಗುತ್ತಾರೆ. ಹೊಸ ಚುನಾವಣೆಯ ಖರ್ಚು ವೆಚ್ಚಗಳನ್ನು ಮತ್ತೆ ಜನರ ತೆರಿಗೆಯ ಹಣದಿಂದಲೇ ಸರಿದೂಗಿಸಬೇಕಾಗುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನೊಂದು ಪಕ್ಷಕ್ಕೆ ಪಕ್ಷಾಂತರವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಶಾಸಕರಿಗೆ ಚುನಾವಣೆಯಲ್ಲಿ ಶಾಶ್ವತ ನಿಷೇಧವನ್ನು ಹೇರುವವರೆಗೆ ಈ ಪ್ರಜಾಸತ್ತೆಯ ಕಗ್ಗೊಲೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸಾವಿರಾರು ಕೋಟಿ ರೂ.ಸುರಿದು ನಡೆಸುವ ಚುನಾವಣೆಗೆ ಯಾವ ಅರ್ಥವೂ ಉಳಿಯುವುದಿಲ್ಲ.

ನಾಡಿನ ಅಭಿವೃದ್ಧಿಯಲ್ಲಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಹೊಣೆಗಾರಿಕೆ ವಿರೋಧ ಪಕ್ಷಕ್ಕೂ ಇದೆ. ಪ್ರಬಲ ವಿರೋಧ ಪಕ್ಷವಿದ್ದಾಗ ಮಾತ್ರ ಆಡಳಿತ ಪಕ್ಷ ಸರಿಯಾದ ದಾರಿಯಲ್ಲಿ ನಾಡನ್ನು ಮುನ್ನಡೆಸಲು ಸಾಧ್ಯ. ವಿರೋಧಪಕ್ಷದಲ್ಲಿ ಕುಳಿತು ಜನರ ಸಂಕಟಗಳಿಗೆ ಧ್ವನಿಯಾಗುವುದು ಆಡಳಿತದ ಭಾಗವೇ ಆಗಿದೆ. ಆಡಳಿತ ಪಕ್ಷ ತಪ್ಪು ದಾರಿಯಲ್ಲಿ ಹೆಜ್ಜೆಯಿಟ್ಟಾಗ ಅದನ್ನು ತಿದ್ದಿ ಸರಿದಾರಿಗೆ ತರುವುದು ವಿರೋಧ ಪಕ್ಷದ ಕರ್ತವ್ಯ. ಈ ಕರ್ತವ್ಯಕ್ಕೆ ವಿಮುಖವಾಗಿ, ಯಾವ ಮಾರ್ಗದಲ್ಲಾದರೂ ಸರಿ, ಅಧಿಕಾರ ಹಿಡಿಯುತ್ತೇವೆ ಎನ್ನುವ ಪಕ್ಷ ಈ ನಾಡಿಗೆ, ಪ್ರಜಾಸತ್ತೆಗೆ ಮಾರಕ ಮತ್ತು ಹಾಗೆ ಅಧಿಕಾರ ಹಿಡಿದ ಪಕ್ಷವೊಂದರಿಂದ ಶೇ. 40 ಕಮಿಷನ್ ಭ್ರಷ್ಟಾಚಾರ ಹೊರತು ಪಡಿಸಿ, ಈ ನಾಡಿಗೆ ಇನ್ನೇನನ್ನೂ ನೀಡಲು ಸಾಧ್ಯವಿಲ್ಲ.

Similar News