ಸ್ಪೀಕರ್ ಸ್ಥಾನ ಅಲಂಕರಿಸಲಿರುವ ಮುಸ್ಲಿಮ್ ಸಮುದಾಯದ ಮೊದಲ ನಾಯಕ ಯು.ಟಿ ಖಾದರ್

Update: 2023-05-23 10:22 GMT

ಬೆಂಗಳೂರು: ನಾಳೆ ಸ್ಪೀಕರ್ ಚುನಾವಣೆ ಇರುವ ಹಿನ್ನಲೆಯಲ್ಲಿ ಇಂದು ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ನ ಮಾಜಿ ಸಚಿವ ಯು.ಟಿ ಖಾದರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಸ್ಪೀಕರ್ ಸ್ಥಾನಕ್ಕೆ ಏರಿದ ಮೊದಲ ಮುಸ್ಲಿಮ್ ಸಮುದಾಯದ ನಾಯಕ ಎಂಬ ಹೆಗ್ಗಳಿಕೆಗೆ ಯುಟಿ ಖಾದರ್ ಪಾತ್ರರಾಗಿದ್ದಾರೆ. 

ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕರು ಜೊತೆಗೆ ಕಾನೂನಿನ ಜ್ಞಾನ ಇರುವವರ ಹುಡುಕಾಟದಲ್ಲಿ ಇದ್ದ ಎಐಸಿಸಿ ನಾಯಕರು ಯುಟಿ ಖಾದರ್ ಗೆ ಮಣೆ ಹಾಕಿದ್ದಾರೆ. ಯುಟಿ ಖಾದರ್ ಎಲ್ ಎಲ್ ಬಿ ಪದವೀಧರರಾಗಿದ್ದು, ಎಂಥದ್ದೇ ಕ್ಲಿಷ್ಟಕರ ಪರಿಸ್ಥಿತಿ ಎದುರಿಸಲು ಪಕ್ವರಿದ್ದಾರೆ ಎಂಬ ಹಿನ್ನಲೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇನ್ನು ಸ್ಪೀಕರ್ ಸ್ಥಾನ ಅಲಂಕರಿಸಲಿರುವ ಯುಟಿ ಖಾದರ್ ಹಿನ್ನಲೆ ನೋಡುವುದಾದರೆ, 

ಯುಟಿ ಖಾದರ್ ಪರಿಚಯ; 

ಹೆಸರು: ಯು ಟಿ ಅಬ್ದುಲ್ ಖಾದರ್ ಫರೀದ್ BA,LLB

ತಂದೆಯ ಹೆಸರು: ಯು ಟಿ ಫರೀದ್ BA,LLB (1972,1978,1999,2004 ನಾಲ್ಕು ಬಾರಿ ಶಾಸಕರು)

ತಾಯಿಯ ಹೆಸರು : ಯು ಟಿ ನಸೀಮಾ ಫರೀದ್ 

ಜನ್ಮ ದಿನಾಂಕ : 12-10-1969

ಶೈಕ್ಷಣಿಕ ವಿವರ-

ಸೈಂಟ್ ಜೆರೋಝ ಶಾಲೆಯಿಂದ ಆರಂಭಗೊಂಡ ಅವರ ಪ್ರಾಥಮಿಕ ಶಿಕ್ಷಣ, ನಂತರ ನಾಲ್ಕನೇ ತರಗತಿಯಿಂದ ಪ್ರೌಢ ಶಿಕ್ಷಣದ ವರೆಗೆ ಸೈಂಟ್ ಅಲೋಶಿಯಸ್ ಕಾಲೇಜ್ ನಲ್ಲಿ ಮುಂದುವರಿಯಿತು, ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ SDM ಕಾಲೇಜಿನಲ್ಲಿ BA, LLB ಪದವಿ ಶಿಕ್ಷಣ ಮುಗಿಸಿದರು.

ಹವ್ಯಾಸ : ಬೈಕ್ ಹಾಗೂ ಕಾರ್ ರೇಸ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೋಟೋ ರೇಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಕೂಡ ಆಸಕ್ತಿ ಹೊಂದಿದ್ದು ಕ್ರಿಕೆಟ್, ಫುಟ್ಬಾಲ್,ವಾಲಿಬಾಲ್,ಹಾಕಿ,ಟೆನ್ನಿಸ್ ಹಾಗೂ ಇತರ ಕ್ರೀಡೆಗಳನ್ನು ಆಡುತ್ತಿದ್ದರು.

ರಾಜಕೀಯ ವಿವರ;

1990ರಲ್ಲಿ NSUI ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,1994 ರಿಂದ 1999ರ ವರೆಗೆ NSUI ಜಿಲ್ಲಾಧ್ಯಕ್ಷರಾಗಿ,1999 ರಿಂದ 2001 ರ ವರೆಗೆ NSUI ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2003 ರಲ್ಲಿ ಘಟಪ್ರಭದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ, 2004 ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು.ನಂತರ ಕೆಪಿಸಿಸಿ ಸದಸ್ಯರಾಗಿ 2008 ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಚುನಾವಣಾ ರಾಜಕೀಯ

2008 ರಲ್ಲಿ ತಮ್ಮ ತಂದೆಯವರ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ನಂತರ 2008,2013,2018 ಹಾಗೂ 2023 ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾದರು.ಅಲ್ಲದೆ ತಾವು ಶಾಸಕರಾಗಿದ್ದ 2008 ರಿಂದ 2013 ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ 'ಶೈನಿಂಗ್ ಇಂಡಿಯಾ ಅವಾರ್ಡ್' ಪ್ರಶಸ್ತಿ ಗಳಿಸಿದರು.

2013ರ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದರು.ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ,ಬೈಕ್ ಅಂಬ್ಯುಲೆನ್ಸ್,108,ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿ ಕೊಂಡಿದ್ದರು.

ನಂತರ 2016 ರಿಂದ 2018 ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10 ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದರು.ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.

2018 ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿ ಯಶಸ್ವಿಯಾದರು.ಈ ಸಂದರ್ಭದಲ್ಲಿ  ವಸತಿ ನಿಗಮದ ಅಧ್ಯಕ್ಷರಾಗಿ,ಕರ್ನಾಟಕ ನಗರನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ,ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ,ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯ ನಿರ್ವಹಿಸಿ ಪ್ರತೀ ಹಂತದಲ್ಲೂ ಸರಕಾರದ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡರು.

Similar News