2 ವರ್ಷದಲ್ಲಿ 118 ಕೋ.ರೂ ವಹಿವಾಟು ನಡೆಸಿ ಜನಮನ್ನಣೆ ಪಡೆದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ: ವಸಂತ್ ಬೆರ್ನಾರ್ಡ್
ಹಳೆಯಂಗಡಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಸ್ಥಾಪನೆಗೊಂಡ ಪ್ರಥಮ 2 ವರ್ಷದ ಅವಧಿಯಲ್ಲಿಯೇ ರೂ. 118 ಕೋಟಿ ರೂ. ವಹಿವಾಟು ನಡೆಸಿ, ಸ್ಥಳೀಯವಾಗಿ ಠೇವಣಿದಾರರ, ಗ್ರಾಹಕರ, ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಎಚ್. ವಸಂತ್ ಬೆರ್ನಾರ್ಡ್ ನುಡಿದರು.
ಅವರು ಸೊಸೈಟಿಯ ಸ್ಥಾಪನಾ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿ, 2 ವರ್ಷ ಅವಧಿಯಲ್ಲಿಯೇ ಠೇವಣಿದಾರರ, ಗ್ರಾಹಕರ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಿಂದ ಇಷ್ಟು ಸಾಧನೆ ಗೈಯಲು ಸಾಧ್ಯವಾಯಿತು. ಮುಂದಿನ ದಿನದಲ್ಲಿ ಸೊಸೈಟಿಯನ್ನು ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಕೂಡಾ ಅನುಕೂಲ ವಾತಾವರಣ ಕಲ್ಪಿಸಲಾಗುವುದು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸ್ವರ್ಣಕುಂಭ ವಿವಿದ್ದೋದ್ದೇಶ ಸಹಕಾರ ಸಂಘ (ನಿ.) ಸುರತ್ಕಲ್ ಇದರ ಅಧ್ಯಕ್ಷ ನಾಗೇಶ್ ಕುಲಾಲ್, ಬೆಳೆಯುತ್ತಿರುವ ಹಳೆಯಂಗಡಿಯ ಅಭಿವೃದ್ಧಿಗೆ ಪ್ರಿಯದರ್ಶಿನಿ ಸೊಸೈಟಿ ಸಹಕಾರಿಯಾಗಿದೆ. ಸೊಸೈಟಿ ಇನ್ನಷ್ಟು ಬೆಳೆದು ಗ್ರಾಮೀಣ ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿಯಾಗಲಿ ಎಂದು ಹಾರೈಸಿದರು.
ಮತ್ತೊಬ್ಬ ಮುಖ್ಯ ಅತಿಥಿ ಉಡುಪಿ ನಾದಶ್ರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾರ್ತಿಕ್ ಕುಮಾರ್ ಮಾತನಾಡಿ, ಪ್ರಿಯದರ್ಶಿನಿ ಸೊಸೈಟಿಯು ಸ್ಥಾಪನೆಯಾದ ದಿನದಿಂದಲೂ ನಾನು ನಿಕಟ ಸಂಬಂಧ ಇರಿಸಿಕೊಂಡವ. ಸಂಘದ ಬೆಳವಣಿಗೆಗೆ ಇತರ ಸಹಕಾರ ಸಂಘಗಳು ಕೈಜೋಡಿಸಿದರೆ “ಸಹಕಾರ” ಎಂಬ ಶಬ್ದಕ್ಕೆ ಮಹತ್ತರವಾದ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ನಿಮ್ಮ ಜೊತೆ ಇದ್ದೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶಶೀಂದ್ರ ಎಮ್. ಸಾಲ್ಯಾನ್, ರೇ ಸ್ಟೀವನ್ ಸರ್ಮೋತ್ತಮ ಮುಲ್ಕಿ, ಅಬ್ದುಲ್ ಖಾದರ್, ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ್ ಜೆ. ಶೆಟ್ಟಿಗಾರ್, ಜೈಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನ್ರಾಜ್ ಕೋಟ್ಯಾನ್, ಮಿರ್ಝಾ ಅಹಮ್ಮದ್, ಶೆರಿಲ್ ಅಯೋನ ಐಮನ್, ಹರೀಶ್ ಪುತ್ರನ್, ನವೀನ್ ಸಾಲ್ಯಾನ್ ಪಂಜ, ಸಂದೀಪ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು.