ಮೇ 26 ರಂದು ಮಂಗಳೂರಿನಲ್ಲಿ ‘ಮುಈನುಸ್ಸುನ್ನಾ’ ದಶಮ ಸಂಭ್ರಮ
ಮಂಗಳೂರು, ಮೇ 24: ಉತ್ತರ ಕರ್ನಾಟಕದ ಬಯಲುಸೀಮೆಯ ಗ್ರಾಮೀಣ ಪ್ರದೇಶಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸ್ಥಾಪಿತವಾದ ಸಂಸ್ಥೆ ಹಾವೇರಿಯ ‘ಮುಈನುಸುನ್ನಾ ’ ಸಂಸ್ಥೆಯು ಇದೀಗ ಹತ್ತನೇ ವರ್ಷಕ್ಕೆ ಪಾದಾರ್ಪಣೆಗೈದಿದ್ದು, ಬಹುಮುಖ ಯೋಜನೆಗಳೊಂದಿಗೆ ವರ್ಷವಿಡೀ ದಶಮ ಸಂಭ್ರಮವನ್ನು ಆಚರಿಸಲಿದೆ. ದಶಮ ಸಂಭ್ರಮದ ಉದ್ಘಾಟನಾ ಸಮಾರಂಭವು ಮೇ 26 ಅಪರಾಹ್ನ 3 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಈನುಸುನ್ನಾ ಸಂಸ್ಥೆಯ ನಿರ್ದೇಶಕ ಕೆ.ಎಂ.ಮುಸ್ತಫಾ ನಮಿ ಹಾವೇರಿ ಅವರು ಮದೀನಾದ ಆಧ್ಯಾತ್ಮಿಕ ನಾಯಕ ಸಯ್ಯದ್ ಹಬೀಬ್ ಆದಿಲ್ ಉಮರ್ ಅಲ್ ಜಿಫ್ರೀ ಭಾಗವಹಿಸಿ ದಶಮ ಸಂಭ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ನ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟಕ್ಕೋಯ ತಂಳ್ ಕುಂಬೋಳ್ ದುಆ ಆಶೀರ್ವಚನ ನೀಡಲಿರುವರು. ಮುಈನುಸುನ್ನಾ ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ಅಧ್ಯಕ್ಷೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಯೆನೆಪೋಯ ವಿವಿ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲ ಕುಂಞಿ ಹಾಜಿ ಉದ್ಘಾಟಿಸಲಿರುವರು.
ಮಲಪ್ಪುರಂ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ತ್ವಾಹಿರ್ ಸಖಾಫಿ ಮಂಜೇರಿ, ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಎಸ್ಎಂಎ ರಾಜ್ಯಾಧ್ಯಕ್ಷ ಸಯ್ಯದ್ ಇಸಾಯೀಲ್ ಅಲ್ ಹಾದಿ ತಂಳ್, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಫಾಝಿಲ್ ರಝ್ವಿ ಹಝ್ರತ್ ಕಾವಳಕಟ್ಟೆ, ಎಸ್ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು, ಮಾಜಿ ರಾಜ್ಯಾಧ್ಯಕ್ಷ ಡಾ. ಝೈನಿ ಕಾಮಿಲ್, ಎಸ್ಜೆಎಂ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಸಾಮಾಜಿಕ ಮುಖಂಡರಾದ ಎಸ್ಸೆಂ ರಶೀದ್ ಹಾಜಿ, ಮುಮ್ತ್ತಾಜ್ ಆಲಿ ಕೃಷ್ಣಾಪುರ, ಆಝಾದ್ ಮನ್ಸೂರ್ ಹಾಜಿ, ಇನಾಯತ್ ಅಲಿ ಮುಲ್ಕಿ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ .ಹನೀಫ್ ಹಾಜಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
2014 ಜೂನ್ 22ರಂದು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ 33 ವಿದ್ಯಾರ್ಥಿಗಳೊಂದಿಗೆ ಸ್ಥಾಪಿತವಾದ ಮುಈನುಸುನ್ನಾ ವಿದ್ಯಾಸಂಸ್ಥೆ ಉತ್ತರ ಕರ್ನಾಟಕದ ಬಯಲುಸೀಮೆಯ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಪರಿವರ್ತನೆಗೆ ಕಾರಣವಾಗಿದೆ. ಕುಡಿತ ಚಟದಿಂದ ಜರ್ಝರಿತಗೊಂಡ ಕುಟುಂಬಗಳ ಮುಗ್ಧ ಕಂದಮ್ಮಗಳು, ಒಂದು ಹೊತ್ತಿನ ಊಟಕ್ಕೂ ಗತಿಇಲ್ಲದ ಅನಾಥ ನಿರ್ಗತಿಕ ಮಕ್ಕಳು ಸೇರಿದಂತೆ ನೂರಾರು ಮಕ್ಕಳಿಗೆ ಮುಈನುಸುನ್ನು ವಸತಿ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದೆ. ಎರಡು ಆಂಗ್ಲ ಮಾಧ್ಯಮ ಶಾಲೆಗಳು, ಶರೀಆತ್ ಕಾಲೇಜು, ಮಹಿಳಾ ಕಾಲೇಜು, 15 ಮಾದರಿ ಮದ್ರಸಾಗಳು, ತಹ್ಫೀಝಲ್ ಕುರ್ಆನ್ ಸೆಂಟರ್ ಸೇರಿದಂತೆ 25 ಶಿಕ್ಷಣ ಕೇಂದ್ರಗಳಲ್ಲಿ ಎರಡು ಸಾವಿರದಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಈನುಸುನ್ನಾ ದಶಮ ಸಂಭ್ರಮದ ಅಂಗವಾಗಿ 10 ಶಾಲೆಗಳ ನಿರ್ಮಾಣ, ಸ್ವಚ್ಛತಾ ಅಭಿಯಾನ, ಅಗತ್ಯ ಪ್ರದೇಶಗಳಲ್ಲಿ ಶೌಚಾಲಯ ತೆರೆಯುವುದು ಸೇರಿದಂತೆ ಹಲವು ಜನೋಪಯೋಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಂ ಮುಸ್ತಫಾ ನಮಿ ಹಾವೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಈನುಸುನ್ನಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ದಶಮ ಸಂಭ್ರಮ ಸಮಿತಿಯ ಚೆಯರ್ಮನ್ ಡಾ.ಶೇಖ್ ಬಾವಾ ಮಂಗಳೂರು, ಸದಸ್ಯರಾದ ಹಾಫಿಳ್ ಅಬ್ದುರ್ರಹ್ಮಾನ್ ಸಖಾಫಿ ಪಂಪ್ವೆಲ್ ಉಪಸ್ಥಿತರಿದ್ದರು.