ನೀವು ದಲಿತರನ್ನು ಅಪ್ಪಿಕೊಳ್ಳುತ್ತೀರಾ?: ಬಿಜೆಪಿ-ಆರೆಸ್ಸೆಸ್ ಗೆ ಅಶೋಕ್ ಗೆಹ್ಲೋಟ್ ಪ್ರಶ್ನೆ

Update: 2023-05-27 12:09 GMT

ಕೋಟಾ: ಬಿಜೆಪಿ- ಆರೆಸ್ಸೆಸ್ ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಿದೆ ಎಂದು ಶುಕ್ರವಾರ ಆರೋಪಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot ) , ಬಿಜೆಪಿ ಹಾಗೂ ಆರೆಸ್ಸೆಸ್  ನವರು ದೇಶದ ದಲಿತರನ್ನು "ಅಪ್ಪಿಕೊಳ್ಳುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ.

ಗೆಹ್ಲೋಟ್ ಅವರು ಬರಾನ್ ಜಿಲ್ಲೆಯಲ್ಲಿ ಹಿಂದೂ ಸಮುದಾಯದ 2,111 ಹಾಗೂ  ಮುಸ್ಲಿಂ ಸಮುದಾಯದ 111 ಜೋಡಿಗಳು ಸೇರಿದಂತೆ 2,222 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, ಬಿಜೆಪಿ ಹಾಗೂ ಆರೆಸ್ಸೆಸ್  ನವರು ಭಿನ್ನಾಭಿಪ್ರಾಯ ಮತ್ತು ತಾರತಮ್ಯವನ್ನು ಸೃಷ್ಟಿಸುತ್ತಾರೆ ಹಾಗೂ  ಹರಡುತ್ತಾರೆ. ದೇಶದ ಜನರಲ್ಲಿ ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತಾರೆ ಎಂದು ಆರೋಪಿಸಿದರು.

"ಅಸ್ಪೃಶ್ಯತೆ ಹಳ್ಳಿಗಳಲ್ಲಿ ಹಾಗೂ  ನಗರ ಪ್ರದೇಶಗಳಲ್ಲಿ ಈಗಲೂ  ಇದೆ. ಕೆಳವರ್ಗದವರ ವಿರುದ್ಧ ತಾರತಮ್ಯವಿದೆ. ಇದು ಎಲ್ಲರಿಗೂ ತಿಳಿದಿದೆ" ಎಂದು ಗೆಹ್ಲೋಟ್  ಹೇಳಿದರು.

ಆರೆಸ್ಸೆಸ್  ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ  ಪ್ರಧಾನಿ ನರೇಂದ್ರ ಮೋದಿ ಅವರು ದಲಿತರ ಕಲ್ಯಾಣಕ್ಕಾಗಿ ತಮ್ಮ ಅಲ್ಪಾವಧಿ ಹಾಗೂ  ದೀರ್ಘಕಾಲೀನ ಯೋಜನೆಗಳನ್ನು ಬಹಿರಂಗಪಡಿಸಬೇಕು ಎಂದು ಗೆಹ್ಲೋಟ್ ಒತ್ತಾಯಿಸಿದರು.

"ದಲಿತರನ್ನು ಯಾರು ನೋಡಿಕೊಳ್ಳುತ್ತಿದ್ದಾರೆ? ನೀವು (ಬಿಜೆಪಿ-ಆರೆಸ್ಸೆಸ್) ಅವರಿಗಾಗಿ ಏನು ಮಾಡುತ್ತಿದ್ದೀರಿ? ನೀವು ದಲಿತರನ್ನು ಅಪ್ಪಿಕೊಳ್ಳುತ್ತೀರಾ?... ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿರುವುದರಿಂದ ಈ ಪ್ರಶ್ನೆಗಳಿಗೆ  ಉತ್ತರಿಸಬೇಕು" ಎಂದು ಗೆಹ್ಲೋಟ್ ಹೇಳಿದರು.

Similar News