ಗ್ಯಾರಂಟಿ ಜಾರಿಯಾಗದಿದ್ದರೆ ಜೂ.1ರಿಂದ ಧರಣಿ: ಕುಯಿಲಾಡಿ ಸುರೇಶ್ ನಾಯಕ್

Update: 2023-05-27 11:36 GMT

ಉಡುಪಿ, ಮೇ 27: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿಯೇ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಹೇಳಿದೆ. ಆದರೆ ಸಚಿವ ಸಂಪುಟ ಸಭೆ ನಡೆದು ಒಂದು ವಾರಗಳಾದರೂ ಯಾವುದೇ ಗ್ಯಾರಂಟಿಗಳು ಇನ್ನೂ ಜಾರಿಯಾಗಿಲ್ಲ. ಆದಷ್ಟು ಬೇಗ ಜಾರಿ ಮಾಡದಿದ್ದರೆ ಜೂನ್ 1ರಿಂದ ಬೀದಿಗೆ ಇಳಿದು ಧರಣಿ ನಡೆಸಲಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ, ಡಿಕೆಶಿ, ಖರ್ಗೆ, ರಾಹುಲ್ ಎಲ್ಲರೂ ಎಲ್ಲರಿಗೂ ಉಚಿತ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಆದುದರಿಂದ ಸರಕಾರ ಗ್ಯಾರಂಟಿಗಳನ್ನು ಜಾರಿ ಮಾಡುವಾಗ ಯಾವುದೇ ಷರತ್ತುಗಳನ್ನು ವಿಧಿಸಬಾರದು. ಈ ಬಗ್ಗೆ ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದಾರೆ ಎಂದರು.

ಜಿಲ್ಲೆಯ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಹಣ ಪಾವತಿ ಮಾಡಬಾರದು. ಒಂದು ವೇಳೆ ಸಿಬ್ಬಂದಿ ಕಿರುಕುಳ ಕೊಟ್ಟರೆ ಬಿಜೆಪಿ ಕಚೇರಿಗೆ ಕರೆ ಮಾಡಿ ತಿಳಿಸಿ, ನಮ್ಮ ಕಾರ್ಯಕರ್ತರು ಬರುತ್ತಾರೆ. ಅದೇ ರೀತಿ ವಿದ್ಯುತ್ ಬಿಲ್ ಕೂಡ ಯಾರು ಪಾವತಿಸಬಾರದು. ಕೇಂದ್ರ ಸರಕಾರ ಉಚಿತವಾಗಿ ನೀಡುವ ಅಕ್ಕಿ ಬಿಟ್ಟು ರಾಜ್ಯ ಸರಕಾರವೇ 10 ಕೆ.ಜಿ. ಅಕ್ಕಿ ಕೊಡ ಬೇಕು. ನಿರುದ್ಯೋಗ ಭತ್ಯೆ ಈ ಬಾರಿ ಉತ್ತೀರ್ಣರಾದವರಿಗೆ ಮಾತ್ರ ಎಂದು ಹೇಳು ಮೂಲಕ ಸರಕಾರ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡ ಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರಿರುವುದು ಸುಳ್ಳು ಭರವಸೆಗಳಿಂದಲೇ ಹೊರತು ಸಾಧನೆಯಿಂದಲ್ಲ ಎಂದು ಅವರು ಟೀಕಿಸಿದರು.

ನರೇಂದ್ರ ಮೋದಿ 15ಲಕ್ಷ ರೂ. ಹಣವನ್ನು ನಿರ್ದಿಷ್ಟವಾಗಿ ಜನ ಖಾತೆಗೆ ಹಾಕುತ್ತೇನೆ ಎಂದು ಹೇಳಿಲ್ಲ. ಮೊದಲೇ ಸಚಿವ ಸಂಪುಟದಲ್ಲಿ ಜನರ ಖಾತೆಗೆ  ಹಣ ಹಾಕುವ ಘೋಷಣೆ ಮಾಡಿಲ್ಲ. ಕಪ್ಪು ಹಣ ತಂದರೆ ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ. ಹಣ ಬರುತ್ತದೆ ಎಂದು ಹೇಳಿದ್ದಾರೆ. ಅದನ್ನು ಬೇರೆ ಬೇರೆ ಯೋಜನೆಗಳ ರೂಪದಲ್ಲಿ ಅಂದರೆ ಆಯುಷ್ಮಾನ್ ಯೋಜನೆ, ಕೃಷಿ ಸಮ್ಮಾನ್ ಯೋಜನೆ ಮೂಲಕ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಘವೇಂದ್ರ ಕಿಣಿ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

ಸುಕುಮಾರ್ ಶೆಟ್ಟಿ ವಿರುದ್ಧ ರಾಜ್ಯ ಘಟಕಕ್ಕೆ ವರದಿ

ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಗೆ ಸಂಬಂಧಿಸಿ ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ ವಿರುದ್ಧ ಕಾರ್ಯಕರ್ತರು ಪಕ್ಷಕ್ಕೆ ದೂರು ಕೊಟ್ಟಿದ್ದಾರೆ. ಆ ಕುರಿತ ವರದಿಯನ್ನು ರಾಜ್ಯ ಘಟಕಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಪಟ್ಟಿಯನ್ನು ಆಯಾ ಮಂಡಲ ಗಳಿಂದ ಪಡೆದುಕೊಂಡಿದ್ದೇವೆ. ಮೂರು ನಾಲ್ಕು ದಿನಗಳಲ್ಲಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಮಿತಿಯಲ್ಲಿ ಇರದ ನಾಯಕರ ಪಟ್ಟಿಯನ್ನು ರಾಜ್ಯಕ್ಕೆ ಕಳುಹಿಸಿಕೊಡಲಾಗುವುದು. ಪಕ್ಷದ ವಿರೋಧಿ ಚಟುವಟಿಕೆ ಯನ್ನು ನಾವು ಸಹಿಸಿಕೊಳ್ಳು ವುದಿಲ್ಲ. ಪಕ್ಷಕ್ಕೆ ನಿರಂತರ ತೊಂದರೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Similar News