ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Update: 2023-05-30 16:44 GMT

ಮಂಗಳೂರು: ಮೂಡುಶೆಡ್ಡೆ ಫಲ್ಗುಣಿ ನದಿ ತೀರದ ಅಧ್ಯಾಪಾಡಿ ಡ್ಯಾಮ್ ನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಲಕ್ಕನಹಳ್ಳಿ ನಿವಾಸಿ ಶಾಹಿಲ್ (19) ಮತ್ತು ಮಂಗಳೂರು ಸೋಮೇಶ್ವರ ನೇತಾಜಿ ರೋಡ್ ಸಂಕೋಲಿಗೆ ನಿವಾಸಿ ಪಿ. ಮನ್ಸೂರ್ (21) ಎಂದು ತಿಳಿದು ಬಂದಿದೆ. ಬಂಧಿತರಿಂದ 3ಲಕ್ಷ ರೂ. ಮೌಲ್ಯದ 10.125 ಕೆಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಮೂಡುಶೆಡ್ಡೆ ಗ್ರಾಮದ ಫಲ್ಗುಣಿ ನದಿಯ ಅಧ್ಯಾಪಾಡಿ ಡ್ಯಾಂ ನ ಬಳಿ ಗಾಂಜಾ ಮಾರಾಟಕ್ಕೆ ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗುರುರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Similar News