ವಾಟ್ಸಪ್ ಗ್ರೂಪ್ನಲ್ಲಿ ನಮಾಝ್ ಬಗ್ಗೆ ಅವಹೇಳನ: ಪುತ್ತೂರು ಡಿವೈಎಸ್ಪಿಗೆ ದೂರು
Update: 2023-05-30 17:14 GMT
ಪುತ್ತೂರು: ವಾಟ್ಸಪ್ ಗ್ರೂಪ್ನಲ್ಲಿ ನಮಾಝ್ಗೆ ಸಂಬಂಧಿಸಿದಂತೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಪುತ್ತೂರು ಡಿವೈಎಸ್ಪಿ ಗಾನ ಪಿ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಅರುಣ್ ಪುತ್ತಿಲ ಬ್ರಿಗೇಡ್ ಪಾಣಾಜೆ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಸಂದೀಪ್ ಪನಿಯನ್ ಎಂಬಾತ ಕಾರ್ಟೂನ್ ರಚಿಸಿ ಅದರಲ್ಲಿ ನಮಾಝಿನ ವ್ಯಂಗ್ಯಚಿತ್ರ ಹಾಕಿ ಅವಹೇಳನ ಮಾಡಿದ್ದು, ಇದರಿಂದಾಗಿ ಭಾವನೆಗಳಿಗೆ ಚ್ಯುತಿಯಾಗಿದೆ. ಅಲ್ಲದೆ ತೀವ್ರ ನೋವುಂಟಾಗಿದೆ. ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿ ಉಂಟು ಮಾಡಲು ಈ ಕೃತ್ಯ ಮಾಡಲಾಗಿದೆ. ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಜೊತೆ ಕಾರ್ಯದರ್ಶಿ ನೌಶಾದ್ ಬೊಳುವಾರು, ಸದಸ್ಯ ಝೈನುದ್ದೀನ್ ವಿಟ್ಲ ಉಪಸ್ಥಿತರಿದ್ದರು.