90 ಮನೆಗಳಿಗೆ ಉಚಿತ ನೀರು ಪೂರೈಸುತ್ತಿರುವ ಸಂತೋಷ್ ಕರ್ಕೇರ !

►ಕಿದಿಯೂರಿನ ಯುವಕನಿಂದ ನಿಸ್ವಾರ್ಥ ಸೇವೆ ►ಪ್ರತಿದಿನ 9 ಗಂಟೆಗಳ ಕೆಲಸ

Update: 2023-06-09 16:44 GMT

ಉಡುಪಿ, ಜೂ.9: ಮುಂಗಾರು ಮಳೆಯ ವಿಳಂಬದಿಂದಾಗಿ ಉಡುಪಿಯಲ್ಲಿ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಈ ಮಧ್ಯೆ ಇಲ್ಲೊಬ್ಬ ಯುವಕ ತಮ್ಮ ಮನೆಯ ಸುತ್ತಮುತ್ತಲಿನ 90 ಮನೆಗಳಿಗೆ ಉಚಿತವಾಗಿ ನೀರು ಪೂರೈಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದು, ಈ ಮೂಲಕ ತನ್ನ ಊರಿನ ನೀರಿನ ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಡ್ಡಿ ನಿವಾಸಿ ಸಂತೋಷ್ ಕರ್ಕೇರ (33) ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಿದಿಯೂರು ಗ್ರಾಮದ ದಡ್ಡಿ ಎಂಬಲ್ಲಿ ನೂರಾರು ಮನೆಗಳಿದ್ದು, ಮಳೆ ಇಲ್ಲದೆ ಎಲ್ಲರ ಮನೆಗಳ ಬಾವಿಯ ನೀರು ಪಾತಾಳಕ್ಕೆ ಇಳಿದಿದೆ. ಅದೇ ರೀತಿ ಈ ಬಾವಿಗಳ ನೀರಿನಲ್ಲಿ ಉಪ್ಪಿನಾಂಶ ಸೇರಿಕೊಂಡಿರುವುದರಿಂದ ನಿತ್ಯದ ಬಳಕೆ ಯೋಗ್ಯವಾಗಿಲ್ಲ. ಈ ಮಧ್ಯೆ ಗ್ರಾಪಂನಿಂದಲೂ ಸರಿಯಾಗಿ ನೀರು ಕೂಡ ಪೂರೈಕೆ ಆಗದೆ ಜನ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಮಹಿಳೆಯರು ಈ ಉರಿ ಬಿಸಿಲಿನಲ್ಲೂ ಮೈಲುಗಟ್ಟಲೆ ನಡೆದು ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸಂತೋಷ್ ತಮ್ಮ ಮನೆಯಿಂದ ಸುಮಾರು 2ಕಿ.ಮೀ. ದೂರದಲ್ಲಿರುವ ಐರಿನ್ ಅಂದ್ರಾದೆ ಎಂಬವರ ಬಾವಿಯಿಂದ ಮನೆಗೆ ನೀರು ತರುತ್ತಿದ್ದರು. ಇದೇ ವೇಳೆ ಇವರು ತಮ್ಮ ನೆರೆಮನೆಯವರಿಗೂ 8-10 ಕೊಡಪಾನ ನೀರನ್ನು ಕೊಡುತ್ತಿದ್ದರು. ಬಳಿಕ ಸುತ್ತಮುತ್ತಲಿನ ಮನೆಯವರು ಕೂಡ ನೀರು ಕೇಳಲು ಆರಂಭಿಸಿದರು. ಅದಕ್ಕಾಗಿ ಸಂತೋಷ್, ತನ್ನ ಗೆಳೆಯ ಪವನ್ ಎಂಬವರ ವಾಹನವನ್ನು ಪಡೆದು ನೆರೆಮನೆಯವರ ಸಿಂಟೆಕ್ಸ್ ಟ್ಯಾಂಕಿಯನ್ನು ಒಟ್ಟು ಮಾಡಿ ನೀರು ಪೂರೈಸಲು ಆರಂಭಿಸಿದರು. ಇದು ಹೀಗೆ ವಿಸ್ತಾರಗೊಂಡು ಈಗ ಇವರು ತಮ್ಮ ಊರಿನ 90 ಮನೆಗಳಿಗೆ ಒಂದು ದಿನ ಬಿಟ್ಟು ಒಂದು ದಿನ ನೀರು ಕೊಡುವ ಕಾರ್ಯ ಮಾಡುತ್ತಿದ್ದಾರೆ.

‘ಒಂದು ತಿಂಗಳ ಹಿಂದೆ ಮನೆಯಲ್ಲಿ ನೀರಿನ ಸಮಸ್ಯೆ ತಲೆದೋರಿತು.  ಇದರಿಂದ ನಾವು ತುಂಬಾ ತೊಂದರೆ ಅನುಭವಿಸುತ್ತಿದ್ದೆವು. ಈ ಬಗ್ಗೆ ಗ್ರಾಪಂ ಮನವಿ ಮಾಡಿದರೂ ಒಂದು ತಿಂಗಳಲ್ಲಿ ನಾಲ್ಕು ಬಾರಿ ಟ್ಯಾಂಕರ್ ನೀರು ಕೊಟ್ಟಿದ್ದರು. ಬಳಿಕ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ. ಹಾಗೆ ನಾನು ನಮ್ಮ ಮನೆಯ ಸುತ್ತಮುತ್ತಲಿನ 17 ಮನೆಗಳಿಗೆ  ನೀರು ಕೊಡುವ ಯೋಜನೆ ಹಾಕಿಕೊಂಡೆ. ಅದು ವಿಸ್ತಾರಗೊಂಡು ಈಗ ಒಂದು ದಿನಕ್ಕೆ 45 ಮನೆಗಳಿಗೆ ಅಂದರೆ ಒಂದು ದಿನ ಬಿಟ್ಟು ಒಂದು ದಿನಕ್ಕೆ ಒಟ್ಟು 90 ಮನೆಗಳಿಗೆ ಉಚಿತವಾಗಿ ನೀರು ಕೊಡುತ್ತಿದ್ದಾನೆ’ ಎಂದು ಸಂತೋಷ ಕರ್ಕೇರ ತಿಳಿಸಿದರು.

‘ಇನ್ನು ಹೆಚ್ಚಿನ ಮನೆಯವರು ನೀರು ಕೇಳುತ್ತಿದ್ದಾರೆ. ಆದರೆ ನನಗೆ ಸಮಯ ಸಾಕಾಗುವುದಿಲ್ಲ. ಒಂದು ಬಾರಿ ನೀರು ತರಲು ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಹೀಗೆ ದಿನಕ್ಕೆ ಆರು ಟ್ರಿಪ್ ಮಾಡಿದರೆ ಪ್ರತಿದಿನ 9 ಗಂಟೆ ಇದಕ್ಕೆ ಸಮಯ ಮೀಸಲಿಡಬೇಕಾಗಿದೆ. ಒಮ್ಮೊಮ್ಮೆ ರಾತ್ರಿ ಮನೆಗೆ ಹೋಗುವಾಗ 10 ಗಂಟೆ ಕೂಡ ಆಗುತ್ತದೆ. ನಮಗೆ ವಿಶ್ರಾಂತಿಯೇ ಸಿಗುತ್ತಿಲ್ಲ. ಆದರೂ ಜನರಿಗೆ ಸೇವೆ ಮಾಡುವುದರಲ್ಲಿ ನನಗೆ ತೃಪ್ತಿ ಸಿಗುತ್ತಿದೆ’ ಎಂದು ಅವರು ಹೇಳಿದರು.

"ನಮ್ಮ ಊರಿನಲ್ಲಿ ನೀರಿನ ಸಮಸ್ಯೆಯ ಗಂಭೀರತೆಯನ್ನು ಅರಿತು ಈ ಕೆಲಸಕ್ಕೆ ಮುಂದಾಗಿದ್ದೇನೆ. ಇಂದಿಗೆ 22 ದಿನಗಳು ಆಗಿದೆ. ಪ್ರತಿದಿನವೂ ನೀರು ಕೊಡುವ ಕೆಲಸ ಮಾಡುತ್ತಿದ್ದೇನೆ. ಒಂದು ಮನೆಗೆ 230 ಲೀಟರ್‌ನಂತೆ ಎರಡು ದಿನಗಳಿಗೊಮ್ಮೆ ನೀರು ಕೊಡುತ್ತಿದ್ದೇನೆ. ಇದರಿಂದ ಜನ ಸಂತೃಪ್ತರಾಗಿದ್ದಾರೆ"
-ಸಂತೋಷ್ ಕರ್ಕೇರ

"ಕಿದಿಯೂರು ಪಡುಪಡ್ಡಿಯಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಗ್ರಾಪಂ ನೀರು ಕೂಡ ಸ್ವಲ್ಪ ದಿನ ಬರುತ್ತಿರಲಿಲ್ಲ. ಸಂತೋಷ್ ತನ್ನ ಮನೆಗೆ ದೂರದಿಂದ ತರುತ್ತಿದ್ದ ನೀರಿನಲ್ಲಿ 10 ಕೊಡ ನೀರು ನಮಗೂ ಕೊಡುತ್ತಿದ್ದರು. ಮುಂದೆ ಎಲ್ಲ ಮನೆಗೆ ನೀರು ಕೊಡಲು ಆರಂಭಿಸಿದರು. ಈಗ ಎರಡು ದಿನಕ್ಕೊಮ್ಮೆ ಹಲವು ಮನೆಗಳಿಗೆ ಕುಡಿಯಲು ನೀರು ಕೊಡುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಉಪಕಾರ ಆಗುತ್ತಿದೆ. ಇಲ್ಲದಿದ್ದರೆ ನಾವು ಈ ಬಿಸಿಲಿನಲ್ಲಿ ಒಂದು ಮೈಲು ನಡೆದು ನೀರು ತರಬೇಕು"
-ಚಂದ್ರಿಕಾ, ಸ್ಥಳೀಯರು. 

Similar News