×
Ad

ಹಿಂದುತ್ವ ಗುಂಪುಗಳ ಮಹಾಪಂಚಾಯತ್ ಗೆ ಅನುಮತಿ ನಿರಾಕರಿಸಿದ ಉತ್ತರಕಾಶಿ ಆಡಳಿತ

Update: 2023-06-14 21:54 IST

ಡೆಹ್ರಾಡೂನ್: ಹಿಂದುತ್ವ ಗುಂಪುಗಳು ಜೂನ್ 15ಕ್ಕೆ ಕರೆದಿರುವ ಮಹಾಪಂಚಾಯತ್ ಗೆ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲಾಡಳಿತ ಮಂಗಳವಾರ ಅನುಮತಿ ನಿರಾಕರಿಸಿದೆ.

ಇಬ್ಬರು ವ್ಯಕ್ತಿಗಳು 14 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದಾರೆನ್ನಲಾದ ಘಟನೆಯ ಬಳಿಕ ಈ ಬೆಳವಣಿಗೆಗಳು ಸಂಭವಿಸಿವೆ. ಜೂನ್ 15ರೊಳಗೆ ಅಂಗಡಿಗಳನ್ನು ಮುಚ್ಚಿ ರಾಜ್ಯದಿಂದ ಹೊರಹೋಗಬೇಕು ಎಂಬುದಾಗಿ ಘಟನೆಯ ಬಳಿಕ ಹಿಂದುತ್ವ ಗುಂಪುಗಳು ಮುಸ್ಲಿಮ್ ವ್ಯಾಪಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ, ಉತ್ತರಕಾಶಿಯ ಪುರೋಲ ಪಟ್ಟಣದಲ್ಲಿ ಉದ್ವಿಗ್ನತೆ ನೆಲೆಸಿದೆ.

ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆನ್ನಲಾದ ಸ್ಥಳೀಯ ಅಂಗಡಿ ಮಾಲೀಕ ಉಬೇದ್ ಖಾನ್ (24) ಮತ್ತು ಓರ್ವ ಮೋಟರ್ ಸೈಕಲ್ ಮೆಕ್ಯಾನಿಕ್ ಜಿತೇಂದ್ರ ಸೈನಿ (23)ಯನ್ನು ಘಟನೆ ನಡೆದ ಒಂದು ದಿನದ ಬಳಿಕ, ಅಂದರೆ ಮೇ 27ರಂದು ಪೊಲೀಸರು ಬಂಧಿಸಿದ್ದಾರೆ.

ಅಪಹರಣವು ‘‘ಲವ್ ಜಿಹಾದ್’’ ಆಗಿದೆ ಎಂದು ಹಿಂದುತ್ವ ಗುಂಪುಗಳು ಆರೋಪಿಸಿವೆ. ಇದನ್ನು ಪ್ರತಿಭಟಿಸಲು ಹಿಂದುತ್ವ ಗುಂಪುಗಳು ಜೂನ್ 15ರಂದು ಮಹಾಪಂಚಾಯತ್ ನಡೆಸಲು ಕರೆ ನೀಡಿವೆ. ಹಿಂದುತ್ವ ಪರವಾಗಿರುವ ಗ್ರಾಮ ಮುಖ್ಯಸ್ಥರ ಸಂಘಟನೆ ಪುರೋಲ ಪ್ರಧಾನ್ ಸಂಘಟನ್ ಈ ಪಂಚಾಯತನ್ನು ಸಂಘಟಿಸಿದೆ.

‘‘ಜೂನ್ 15ರಂದು ಮಹಾಪಂಚಾಯತ್ ನಡೆಸಲು ಪುರೋಲ ಪ್ರಧಾನ್ ಸಂಘಟನ್ಗೆ ನಾವು ಅನುಮತಿ ನಿರಾಕರಿಸಿದ್ದೇವೆ’’ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ದೇವಾನಂದ ಶರ್ಮ ಹೇಳಿದರು. ‘‘ಸೋಮವಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿ ಜೊತೆ ಶಾಂತಿ ಸಭೆ ನಡೆಸಿದ ಬಳಿಕ, ಪ್ರತಿಭಟನೆಗೆ ಅನುಮತಿ ಕೋರುವ ಅರ್ಜಿಯನ್ನು ವಾಪಸ್ ಪಡೆದಿದ್ದೇವೆ ಎಂದು ಸಂಘಟಕರು ಲಿಖಿತ ಹೇಳಿಕೆ ನೀಡಿದ್ದಾರೆ’’ ಎಂದರು.

ಮಹಾಪಂಚಾಯತ್ ವಿರುದ್ಧದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಜೂನ್ 15ಕ್ಕೆ ಕರೆನೀಡಲಾಗಿರುವ ಮಹಾಪಂಚಾಯತ್ ಅನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಈ ವಿಷಯದಲ್ಲಿ ಅರ್ಜಿದಾರರು ಹೈಕೋರ್ಟ್ ಗೆ ಹೋಗಬಹುದು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ರಜಾ ಕಾಲದ ನ್ಯಾಯಪೀಠವೊಂದು ತೀರ್ಪು ನೀಡಿದೆ. ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.

ಅರ್ಜಿದಾರರು ಹೈಕೋರ್ಟ್ ಮೇಲೆ ನಂಬಿಕೆ ಇಡಬೇಕು ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು. ‘‘ಹೈಕೋರ್ಟ್ ಗೆ ಹೋಗುವುದಕ್ಕೆ ನೀವು ಯಾಕೆ ಹಿಂದೇಟು ಹಾಕುತ್ತಿದ್ದೀರಿ? ಈ ನ್ಯಾಯಾಲಯದಿಂದ ಸೂಚನೆ ಹೊರಟರೆ ಹೈಕೋರ್ಟ್ ಆದೇಶ ನೀಡುತ್ತದೆ’’ ಎಂದರು.

Similar News