ದ.ಕ.ಜಿಲ್ಲೆಯಲ್ಲಿ ಮತೀಯ ಹಿಂಸಾಚಾರದ ತಡೆಗೆ ಮುಖ್ಯಮಂತ್ರಿ ಬಳಿ ನಿಯೋಗ
ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಜಂಟಿ ವೇದಿಕೆಯ ಸಭೆಯಲ್ಲಿ ನಿರ್ಧಾರ
ಮಂಗಳೂರು: ಜಿಲ್ಲೆಯ ಜನಜೀವನವನ್ನು ಅಸಹನೀಯಗೊಳಿಸಿರುವ ಕೋಮುವಾದಿ ಅಜೆಂಡಾ, ಮತೀಯ ಹಿಂಸೆಗಳ ವಿರುದ್ಧ ಸಂಘಟಿತವಾಗಿ ಕೆಲಸ ಮಾಡುವ ಉದ್ದೇಶದೊಂದಿಗೆ ದ.ಕ. ಜಿಲ್ಲೆಯ ಸಮಾನ ಮನಸ್ಕ ಪಕ್ಷ, ಸಂಘಟನೆಗಳು ಒಂದಾಗಿ ರಚಿಸಿಕೊಂಡಿರುವ ‘ದ.ಕ.ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ-ಮಂಗಳೂರು’ ಇದರ ಸಭೆಯು ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದಲ್ಲಿ ನಡೆಯಿತು.
ಬಿಜೆಪಿ ಸರಕಾರದ ಅವಧಿಯಲ್ಲಿ ಅವ್ಯಾಹತವಾಗಿ ನಡೆದ ಕೋಮು ಪ್ರಚೋದಕ ಕೃತ್ಯಗಳು, ಸರಣಿ ಕೊಲೆಗಳ ಕುರಿತು ಸಭೆಯು ಗಹನವಾದ ಚರ್ಚೆ ನಡೆಸಿತು. ರಾಜ್ಯ ಹಾಗೂ ದೇಶದ ಎಲ್ಲಿಯೂ ಘಟಿಸದ ಮತೀಯ ದ್ವೇಷದ ಸರಣಿ ಕೊಲೆಗಳು ಎರಡು ದಶಕಗಳಿಂದ ದ.ಕ.ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿರುವ ಬಗ್ಗೆ ಮತ್ತು ಅಂತಹ ಕೊಲೆಗಳು ಜಿಲ್ಲೆಯಲ್ಲಿ ಮತೀಯ ದ್ವೇಷ, ಉದ್ವಿಗ್ನತೆ, ಧ್ರುವೀಕರಣವನ್ನು ಏರುಗತಿಗೆ ಕೊಂಡೊಯ್ದಿರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ರಾಜಕೀಯ ಬೆಂಬಲದಿಂದ ನಡೆದಿರುವ ಇಂತಹ ಕೊಲೆಗಳಲ್ಲಿ ಹೆಚ್ಚಿನ ಪ್ರಕರಣಗಳ ಬಗ್ಗೆ ಸರಿಯಾದ ತನಿಖೆ ನಡೆಯದಿರುವುದು, ಕೊಲೆಯ ಹಿಂದಿರುವ ಶಕ್ತಿಗಳ ಪಾತ್ರ ಬಹಿರಂಗಗೊಳ್ಳದಿರುವುದು, ನೈಜ ಕೊಲೆಗಾರರು ತಪ್ಪಿಸಿಕೊಂಡಿರುವುದು, ಅಂತಹ ಶಕ್ತಿಗಳು ಕಾನೂನು ಕ್ರಮಕ್ಕೆ ಒಳಗಾಗದಿರುವುದು ಸರಣಿ ಕೊಲೆಗಳು ಮುಂದು ವರಿಯಲು ಪ್ರಧಾನ ಕಾರಣವಾಗಿದೆ. ಮತೀಯ ದ್ವೇಷದ ಕೊಲೆಗಳ ನೈಜ ಅಪರಾಧಿಗಳು, ಪಿತೂರಿದಾರರು, ಸಂಪನ್ಮೂಲ ಒದಗಿಸುವವರು ಕಾನೂನಿನ ಬಲೆಗೆ ಬಿದ್ದರೆ ಜಿಲ್ಲೆಯಲ್ಲಿ ಮತೀಯ ಹಿಂಸೆಗೆ ಬಹುತೇಕ ಕಡಿವಾಣ ಬೀಳಲಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಲಿದೆ. ಅದಕ್ಕಾಗಿ ಕಳೆದ ಎರಡು ದಶಕಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮತೀಯ ದ್ವೇಷದಿಂದ ನಡೆದಿರುವ ಎಲ್ಲಾ ಕೊಲೆಗಳನ್ನು ಮರು ತನಿಖೆಗೆ ಒಳಪಡಿಸಬೇಕು, ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಇತ್ಯಾದಿ ಬೇಡಿಕೆಯನ್ನು ಸರಕಾರದ ಮುಂದಿಡಲು ನಿರ್ಧರಿಸಲಾಯಿತು.
ಕೋಮುವಾದ, ಮತೀಯದ್ವೇಷ, ಧಾರ್ಮಿಕ ಪೂರ್ವಾಗ್ರಹಗಳನ್ನು ಕಡಿಮೆಗೊಳಿಸಲು ಸರಕಾರವು ತಳಮಟ್ಟ ದಿಂದಲೇ ಮಾಡಬೇಕಾದ ಕೆಲಸಗಳ ಕುರಿತು ಸಭೆಯಲ್ಲಿ ಸಲಹೆಗಳು ಬಂದವು. ಮತೀಯ ಪೂರ್ವಾಗ್ರಹಕ್ಕೆ ಒಳಗಾಗಿರುವ ಸಾಂಸ್ಕತಿಕ ರಂಗ, ಶೈಕ್ಷಣಿಕ ರಂಗಗಳನ್ನು ಸರಿಪಡಿಸಲು ಜಿಲ್ಲೆಗೆ ರಾಜ್ಯ ಸರಕಾರ ವಿಶೇಷ ಯೋಜನೆ ಸಿದ್ಧಪಡಿಸಬೇಕು, ಪೊಲೀಸ್, ಕಂದಾಯ, ಆಡಳಿತ ಇಲಾಖೆಗಳಲ್ಲಿ ಅಮೂಲಾಗ್ರ ಬದಲಾವಣೆ ತರ ಬೇಕು, ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಕೋಮುವಾದ, ಜಾತ್ಯತೀತತೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳುವುದು, ಆ್ಯಂಟಿ ಕಮ್ಯೂನಲ್ ವಿಂಗ್ಗೆ ದಕ್ಷ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸು ವುದು, ಕೋಮುವಾದಿ ಚಟುವಟಿಕೆಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಿವಿಲ್ ವಾಚ್ ಸಮಿತಿ ರಚಿಸುವುದು, ದ್ವೇಷ ಭಾಷಣ, ಮತೀಯ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡಲು ದೃಢ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳುವಂತಾಗಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು.
ಈ ಎಲ್ಲಾ ಬೇಡಿಕೆ, ಪ್ರಸ್ಥಾವನೆ, ಸಲಹೆಗಳನ್ನು ಒಳಗೊಂಡ ಮನವಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೊಂದಿಗೆ ವಿಶೇಷ ಸಭೆ ನಡೆಸಬೇಕು. ಅದಕ್ಕಾಗಿ ಜಿಲ್ಲಾ ಮಟ್ಟದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡಯ್ಯಲು ಸಭೆ ತೀರ್ಮಾನಿಸಿತು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಹಂಪಿ ವಿವಿ ವಿಶ್ರಾಂತ ಪ್ರೊ.ಡಾ. ಚಂದ್ರಪೂಜಾರಿ, ದಲಿತ ನಾಯಕ ಎಂ ದೇವದಾಸ್, ಕೊಂಕಣಿ ಅಕಾಡಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ರಾಜ್ಯ ರೈತ ಸಂಘದ ಪ್ರೇಮನಾಥ ಶೆಟ್ಟಿ, ಪ್ರಾಂತ ರೈತ ಸಂಘದ ಕೃಷ್ಣಪ್ಪ ಸಾಲ್ಯಾನ್, ಕಾರ್ಮಿಕ ಮುಂದಾಳುಗಳಾದ ಸುನಿಲ್ ಕುಮಾರ್ ಬಜಾಲ್, ಬಿಎಂ ಭಟ್, ಸೀತಾರಾಮ ಬೇರಿಂಜೆ, ತಿಮ್ಮಪ್ಪಕಾವೂರು, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ರಘು ಎಕ್ಕಾರು, ಮುಸ್ಲಿಂ ವರ್ತಕರ ಸಂಘದ ಯಾಸೀನ್ ಕುದ್ರೋಳಿ, ಚಿಂತಕರಾದ ಎಂಜಿ ಹೆಗ್ಡೆ, ಡಾ. ಉದಯ ಕುಮಾರ್ ಇರ್ವತ್ತೂರು, ಮಾಜಿ ಮೇಯರ್ ಕೆ. ಅಶ್ರಫ್, ಮಾಜಿ ಉಪಮೇಯರ್ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಡಿವೈಎಫ್ಐ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ಮಹಿಳಾ ನಾಯಕಿಯರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸರೋಜಿನಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ರಂಗಕರ್ಮಿಗಳಾದ ಪ್ರಭಾಕರ ಕಾಪಿಕಾಡ್, ವಿದ್ದು ಉಚ್ಚಿಲ್, ಯುವ ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಕಾಂಗ್ರೆಸ್ ನಾಯಕರಾದ ಕೆ.ಕೆ.ಶಾಹುಲ್ ಹಮೀದ್, ಶಬೀರ್ ಸಿದ್ದಕಟ್ಟೆ, ಮುಸ್ಲಿಂ ಯುವಜನ ಪರಿಷತ್ನ ಅಶ್ರಫ್ ಕಲ್ಲೇಗ, ವಿದ್ಯಾರ್ಥಿ ಸಂಘಟನೆಯ ರೇವಂತ್ ಕದ್ರಿ, ವಿನೀತ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.