ಹಾಲಾಡಿ: ವಿದ್ಯಾಪೋಷಕ್ ವಿದ್ಯಾರ್ಥಿನಿಗೆ ಮನೆ ಹಸ್ತಾಂತರ
ಉಡುಪಿ, ಜೂ.20: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ಹಾಲಾಡಿ ಸಮೀಪದ ಗೋರಾಜೆಯ ಸಿಂಚನಾ (ಲಲಿತಾ ಮತ್ತು ದಿ.ಸಂಜೀವ ಕುಲಾಲ ಇವರ ಪುತ್ರಿ) ಇವಳಿಗೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಪ್ರಾಯೋಜಕತ್ವ ದಲ್ಲಿ ಸುಮಾರು 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಕಸ್ತೂರಿ ನಿವಾಸ’ವನ್ನು ಸೋಮವಾರ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತಮ್ಮ ಅನುಗ್ರಹ ಸಂದೇಶವನ್ನು ನೀಡಿದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ನೀಡಿದರೆ ಎಲ್ಲರೂ ನೆಮ್ಮದಿಯಿಂದ ಬಾಳಲು ಸಾಧ್ಯ. ದುಂಬಿ ಬೇರೆ ಬೇರೆ ಹೂವುಗಳ ಮಕರಂದವನ್ನು ಹೀರಿ ಸಿಹಿಯಾದ ಜೇನನ್ನು ಕೊಡುವ ಹಾಗೆ ಯಕ್ಷಗಾನ ಕಲಾರಂಗ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಮನೆಯ ರೂಪದಲ್ಲಿ ಬಡವರಿಗೆ ನೀಡಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಂದ್ರ ತೀರ್ಥರೂ ಅನುಗ್ರಹ ಸಂದೇಶ ನೀಡಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ವೈಜಯಂತಿ ಕಾಮತ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಾಲಾಡಿ ಗ್ರಾಪಂ ಉಪಾಧ್ಯಕ್ಷ ಜನಾರ್ದನ, ಯು.ವಿಶ್ವನಾಥ ಶೆಣೈ, ಕೆ.ಸದಾಶಿವ ಭಟ್, ಯು.ರಾಜಗೋಪಾಲ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೆ. ಸದಾಶಿವ ರಾವ್, ಅನಂತರಾಜ ಉಪಾಧ್ಯ, ಬಿ.ಭುವನಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಕೃಷ್ಣಮೂರ್ತಿ ಭಟ್, ನಟರಾಜ ಉಪಾಧ್ಯ, ಕಿಶೋರ್ ಸಿ. ಉದ್ಯಾವರ, ಕೆ. ಅಜಿತ್ ಕುಮಾರ್ ಹಾಗೂ ನಾಗರಾಜ ಹೆಗಡೆ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಹೆಚ್.ಎನ್.ಶೃಂಗೇಶ್ವರ ಹಾಗೂ ನಾರಾಯಣ ಎಂ. ಹೆಗಡೆ ವಂದಿಸಿದರು. ಇದು ಯಕ್ಷಗಾನ ಕಲಾರಂಗ ಸಂಸ್ಥೆ ದಾನಿಗಳ ನೆರನಿಂದ ನಿರ್ಮಿಸಿದ 39ನೆಯ ಮನೆಯಾಗಿದೆ. ಇನ್ನೂ 9 ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ.