ಜುಲೈ 30ರವರೆಗೆ ರಾಜ್ಯದಲ್ಲಿ ಮೋದಿ ಸರಕಾರದ 9 ವರ್ಷಗಳ ಸಾಧನೆಗಳ ಪ್ರಚಾರ ಅಭಿಯಾನ: ಸಿ.ಟಿ.ರವಿ
ಮಂಗಳೂರು, ಜೂ.22: ಮೋದಿ ನೇತೃತ್ವದ ಕೇಂದ್ರ ಸರಕಾರದ 9 ವರ್ಷಗಳ ಸಾಧನೆಗಳ ಪ್ರಚಾರ ಅಭಿಯಾನವು ರಾಜ್ಯದಲ್ಲಿ ಜುಲೈ 30ರವರೆಗೆ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಜೂನ್ 30ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಈ ಕಾರ್ಯ ಕ್ರಮದ ಪ್ರಯಕ್ತ ಜಿಲ್ಲಾ ಪ್ರವಾಸಕ್ಕೆ 7 ತಂಡ ರಚಿಸಲಾಗಿದೆ ಎಂದು ಹೇಳಿದರು.
2014ರ ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಅನುಷ್ಠಾನದ ಮೂಲಕ ಸಾಧನೆ ಮಾಡಿದೆ.ಮೂವತ್ತಕ್ಕೂ ಹೆಚ್ಚು ತೆರಿಗೆ ಗಳನ್ನು ಸೇರಿಸಿ ಜಿಎಸ್ ಟಿ ಮಾಡಲಾಗಿದೆ. ದೇಶದಲ್ಲಿ ಜಿಎಸ್ ಟಿ ಮೂಲಕ ದಾಖಲೆಯ ತೆರಿಗೆ ಸಂಗ್ರಹ ವಾಗಿದೆ. ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ, 11 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ದೇಶದಲ್ಲಿ ಹಿಂದೆ 74 ವಿಮಾನ ನಿಲ್ದಾಣಗಳಿತ್ತು. ಈ ಸಂಖ್ಯೆ ಕಳೆದ ಒಂಭತ್ತು ವರ್ಷಗಳಲ್ಲಿ 141ಕ್ಕೆ ಏರಿಕೆಯಾಗಿದೆ. ಹೊಸದಾಗಿ 14 ಐಐಎಂ, 25 ಏಮ್ಸ್ ಆಸ್ಪತ್ರೆ, 225 ಮೆಡಿಕಲ್ ಕಾಲೇಜು,390 ವಿಶ್ವವಿದ್ಯಾನಿಲಯಗಳು, ಸಾಗರ ಮಾಲಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದವರು ವಿವರಿಸಿದರು.
ದೇಶದ ಅಭಿವೃದ್ಧಿ ಸೂಚ್ಯಂಕ 7.2 ದಾಖಲಾಗಿದೆ. ಕೋವಿಡ್ ನಂತರ ಆರ್ಥಿಕವಾಗಿ ದೇಶದ 5ನೇ ಪ್ರಬಲ ದೇಶವಾಗಿ ಭಾರತ ಮೋದಿಯವರ ಆಡಳಿತದಲ್ಲಿ ಪ್ರಗತಿ ಸಾಧಿಸಿದೆ. ಈ ಸಾಧನೆಗಳನ್ನು ಮನೆ ಮನೆಗೆ ತಿಳಿಸಲು ಅಭಿಯಾನ ನಡೆಯುತ್ತಿದೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ವೆಬ್ ಸೈಟ್ ಹ್ಯಾಕ್ ಬಗ್ಗೆ ಕಾಂಗ್ರೆಸ್ ಮುಖಂಡ ರ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ,ಕಾಂಗ್ರೆಸ್ ನಾಯಕರ ಹೇಳಿಕೆ ಮುಂದೆ ಬೇರೆ ರೀತಿ ತಿರುಗಬಹುದು. ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ ಎನ್ನಬಹುದು ಎಂದು ವ್ಯಂಗ್ಯವಾಡಿದರು.
ಹೊಂದಾಣಿಕೆ ರಾಜಕೀಯದ ಬಗ್ಗೆ ನನ್ನದು ನೋ ಕಾಮೆಂಟ್ಸ್. ನಾವು ರಾಜ್ಯದ ಸೋಲು ಒಪ್ಪಿಕೊಳ್ತೇವೆ, ಆದರೆ ಹೀನಾಯ ಸೋಲಲ್ಲ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಕೇಶವ ಪ್ರಸಾದ್, ವೇದವ್ಯಾಸ ಕಾಮತ್, ಬಿಜೆಪಿ ಪದಾಧಿಕಾರಿಗಳಾದ ಉದಯ ಕುಮಾರ್ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರ್ ಉಪಸ್ಥಿತರಿದ್ದರು.