ʼಶಿಕ್ಷಕರ ನೇಮಕಾತಿ ಅಧಿಸೂಚನೆʼ ಲೋಪ ಸರಿಪಡಿಸುವಂತೆ ಸಚಿವ ವಿಜಯಾನಂದ ಕಾಶಪ್ಪನವರ್ಗೆ ಮನವಿ
ಬಾಗಲಕೋಟೆ : ಕರ್ನಾಟಕದಲ್ಲಿ 2026–27ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರು, ಪದವೀಧರ ಪ್ರಾಥಮಿಕ ಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗಳಲ್ಲಿರುವ ಲೋಪಗಳನ್ನು ಸರಿಪಡಿಸುವಂತೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಎಸ್.ಕಾಶಪ್ಪನವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನೇಮಕಾತಿ ಪರೀಕ್ಷಾ ಪ್ರಕ್ರಿಯೆ ಮುಗಿಯುವ ಮುನ್ನವೇ ಪರಿಷ್ಕೃತ ಅಥವಾ ಪೂರಕ ಅಧಿಸೂಚನೆ ಹೊರಡಿಸಿ, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಲ್ಲಿ ಒತ್ತಾಯಿಸಲಾಯಿತು.
ಉರ್ದು ಮಾಧ್ಯಮ ಶಿಕ್ಷಕರ ಖಾಲಿ ಹುದ್ದೆಗಳನ್ನು ನೇಮಕಾತಿಯಲ್ಲಿ ತಕ್ಷಣವೇ ಸೇರ್ಪಡೆ ಮಾಡಬೇಕು. ಗಣಿತ ವಿಷಯದ ಖಾಲಿ ಹುದ್ದೆಗಳ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕು. ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಭಾಷಾ ಆಯ್ಕೆಯ ಅವಕಾಶ ಕಲ್ಪಿಸಬೇಕು. ವಯೋಮಿತಿ ಮೀರಿದ ಸಾವಿರಾರು ಶಿಕ್ಷಕ ಆಕಾಂಕ್ಷಿಗಳಿಗೆ 5 ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಪದಾಧಿಕಾರಿಗಳು ಹಕ್ಕೊತ್ತಾಯ ಮಂಡಿಸಿದರು.
ರಾಜ್ಯದ ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅನ್ಯಾಯವಾಗದಂತೆ ಪಾರದರ್ಶಕ ಹಾಗೂ ಸಮಾನ ಅವಕಾಶ ನೀಡಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ವೈ.ಎಂ ಇಳಕಲ್ ನಗರಾಧ್ಯಕ್ಷ ಮುಹಮ್ಮದ್ ಸಿರಾಜ್ ಹುಣಚಗಿ, ಕಾರ್ಯದರ್ಶಿ ಮುಜಮ್ಮಿಲ್ ಹಕ್ಕಿ ಹಾಗೂ ಕಾರ್ಯಕರ್ತ ಎಲ್. ಎ. ಬಂಡಾರಿ ಉಪಸ್ಥಿತರಿದ್ದರು.