ಬಂದ್ಯೋಡು : ಬೈಕ್–ಪಿಕಪ್ ಢಿಕ್ಕಿ; ಓರ್ವ ಸಾವು, ಇನ್ನೋರ್ವ ಗಂಭೀರ ಗಾಯ
Update: 2026-02-18 14:18 IST
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡು ಸಮೀಪ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮಂಗಳೂರು ನಿವಾಸಿ ನಿರಂಜನ್ (24) ಮೃತಪಟ್ಟವರು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಂಗಳೂರು ಶಕ್ತಿನಗರದ ಕೃತಿಕ್ ಬೆನ್ನಿ (24) ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಕಾಸರಗೋಡು ಕಡೆಗೆ ಪ್ರವಾಸಕ್ಕೆ ತೆರಳಿ ಮರಳುತ್ತಿದ್ದರೆನ್ನಲಾಗಿದೆ.
ಕಾಸರಗೋಡು ಕಡೆಯಿಂದ ಬೈಕ್ನಲ್ಲಿ ಮಂಗಳೂರಿಗೆ ತೆರಳುತ್ತಿದ್ದಾಗ ಬಂದ್ಯೋಡು ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ನಿರಂಜನ್ ಚಲಾಯಿಸುತ್ತಿದ್ದ ಬೈಕ್ ಎದುರಿನಿಂದ ಬಂದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ಬಂದ್ಯೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದರೂ ನಿರಂಜನ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ತಿಳಿದು ಬಂದಿದೆ.