ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್–ಕಾರು ಢಿಕ್ಕಿ; ಓರ್ವ ಮೃತ್ಯು
ಕಾಸರಗೋಡು: ಬದಿಯಡ್ಕ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಸಮೀಪ ಶನಿವಾರ ಮುಂಜಾನೆ ಸಂಭವಿಸಿದ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದು, ಅವರ ಮಗ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
ಮೃತರನ್ನು ನೆಲ್ಲಿಕಟ್ಟೆಯ ಸಂಶುದ್ದೀನ್ (68) ಎಂದು ಗುರುತಿಸಲಾಗಿದೆ. ಅವರ ಮಗ ಸಲ್ಮಾನ್ ಹಾರಿಸ್ (22) ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆ ಅಪಘಾತ ಸಂಭವಿಸಿದೆ.
ಕಾಸರಗೋಡಿನಿಂದ ಪುತ್ತೂರಿಗೆ ಸಾಗುತ್ತಿದ್ದ ಕೆಎಸ್ಸಾರ್ಟಿಸಿ(ಕರ್ನಾಟಕ) ಬಸ್ ಮತ್ತು ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣದತ್ತ ತೆರಳುತ್ತಿದ್ದ ಕಾರು ಪರಸ್ಪರ ಢಿಕ್ಕಿ ಹೊಡೆದಿವೆ. ಢಿಕ್ಕಿಯ ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ತಂದೆ–ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಸಂಶುದ್ದೀನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.