×
Ad

ಕಾಸರಗೋಡು | ಚಿನ್ನಾಭರಣ ಕಳವು ಆರೋಪದಿಂದ ನೊಂದು ಯುವತಿ ಆತ್ಮಹತ್ಯೆ

Update: 2026-02-22 11:00 IST

ಕಾಸರಗೋಡು: ಚಿನ್ನಾಭರಣ ಕಳವು ಆರೋಪದಿಂದ ಮಾನಸಿಕವಾಗಿ ನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಸಮೀಪದ ನೆಲ್ತಡ್ಕ ದಲ್ಲಿ ನಡೆದಿದೆ.

ನೆಲ್ತಡ್ಕ ನಿವಾಸಿ ಜಸೀಲಾ (24) ಮೃತಪಟ್ಟವರು. ಇವರು ನೆರೆಮನೆಯವರ ಹಾಗೂ ಪೊಲೀಸರಿಂದ ಮಾನಸಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪತಿ ಮನೆಯ ಸಮೀಪದ ಯುವಕ ಹಾಗೂ ಆತನ ಕುಟುಂಬಸ್ಥರು ಜಸೀಲಾ ವಿರುದ್ಧ ಚಿನ್ನಾಭರಣ ಕಳವು ಆರೋಪ ಹೊರಿಸಿದ್ದರು. ಪೊಲೀಸ್ ದೂರು ಕೂಡಾ ನೀಡಿದ್ದರು. ಈ ಸಂಬಂಧ ಜಸೀಲಾರನ್ನು ಪೊಲೀಸ್ ಠಾಣೆಗೆ ಕೊಂಡೊಯ್ದು ಪೊಲೀಸರು ವಿಚಾರಣೆ ಹೆಸರಲ್ಲಿ ಮಾನಸಿಕವಾಗಿ ಕಿರುಕುಳ ನೀಡಿದ್ದರು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರೂ ಚಿನ್ನಾಭರಣ ಕಳವಿಗೆ ಸಂಬಂಧಿಸಿ ಜಸೀಲಾ ವಿರುದ್ಧ ಯಾವುದೇ ಸುಳಿವು, ಸಾಕ್ಷ್ಯಗಳು ಲಭಿಸದ ಹಿನ್ನೆಲೆಯಲ್ಲಿ ಅವರು ಬಿಡುಗಡೆ ಗೊಳಿಸಲಾಗಿತ್ತು. ಎರಡು ಮಕ್ಕಳ ತಾಯಿಯಾದ ಜಸೀಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಅಪಪ್ರಚಾರ ನಡೆಸಲಾಗಿತ್ತು. ಇದು ಮಾನಸಿಕವಾಗಿ ಅವರನ್ನು ಕುಗ್ಗಿಸಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇವೆಲ್ಲದರಿಂದ ಮನನೊಂದಿದ್ದ ಜಸೀಲಾ ಕಳೆದ ರವಿವಾರ ತಾನು ಅಮಾಯಕಿ ಎಂದು ವಿಡಿಯೋ ಚಿತ್ರೀಕರಣ ಮಾಡಿ ವಿಷ ಸೇವಿಸಿದ್ದಳು ಎನ್ನಲಾಗಿದೆ. ಇದರಿಂದ ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.

ಅದೂರು ಠಾಣಾ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News