ಕೆರೆಗಳಿಗೆ ನೀರು ತುಂಬಿಸುವಲ್ಲಿ ಏಷ್ಯಾದಲ್ಲೇ ನಾವೇ ಮುಂದು : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ. 9: ಕೆರೆಗಳಿಗೆ ನೀರು ತುಂಬಿಸುವುದರಲ್ಲಿ ನಾವೇ ಮುಂದೆ ಇದ್ದು, ಏಷ್ಯಾದಲ್ಲೇ ಉತ್ತಮ ಕಾರ್ಯ ಕರ್ನಾಟಕ ರಾಜ್ಯದಲ್ಲಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ‘ನೀರಿದ್ದರೆ ನಾವು, ನೀರಿದ್ದರೆ ನಾಳೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕತೆ ಬೆಳೆದದ್ದು-ಉಳಿದಿರುವುದು ನೀರಿನಿಂದಲೇ.ಹಾಗಾಗಿ, ನೀರಿನ ಸಂರಕ್ಷಣೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಜನರಲ್ಲಿ ನೀರಿನ ಬಳಕೆ, ನೀರಿನ ಮೌಲ್ಯ ಮತ್ತು ಅಂತರ್ಜಲ ವೃದ್ಧಿ ಬಗ್ಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರು ಉತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಇದು ಆರೋಗ್ಯಕರ ಸಂಗತಿಯಾಗಿದೆ. ಜತೆಗೆ, ಜನರಿಗೆ ನೀರಿನ ಅಗತ್ಯ ಮತ್ತು ನೀರಿನ ಸ್ಥಿತಿ ಗತಿ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಸಬೇಕು ಎಂದು ಅವರು ಕರೆ ನೀಡಿದರು.
ರಾಜ್ಯದಲ್ಲಿ 37 ಲಕ್ಷ ಕೊಳವೆಬಾವಿ(ಬೋರ್ವೆಲ್)ಗಳ ಮೂಲಕ ಅಂತರ್ಜಲ ಬಳಕೆ ಆಗುತ್ತಿದೆ.ಆದರೆ, ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಕೊಳವೆ ಬಾವಿಗಳೂ ಇವೆ ಎಂದ ಅವರು, 144 ತಾಲೂಕುಗಳನ್ನು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ನೀರಿನ, ಅಂತರ್ಜಲದ ಪ್ರಮಾಣ ಕೊರತೆ ಇದೆ. ಈ ಕಾರಣಕ್ಕೇ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲ್ಯೂ ಯೋಜನೆ ಜಾರಿ ಮಾಡಲಾಯಿತು. ಇದರಿಂದ ಈಗ ಅಂತರ್ಜಲ ವೃದ್ಧಿಯಾಗಿದೆ ಎಂದರು.
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಸಾವಿರಾರು ಕೋಟಿ ಖರ್ಚು ಮಾಡಿದ್ದೇವೆ. ಇದರಿಂದ ಅಂತರ್ಜಲ ಉತ್ತಮವಾಗಿ ವೃದ್ಧಿಯಾಗಿದೆ ಎಂದೂ ಮುಖ್ಯಮಂತ್ರಿ ಉಲ್ಲೇಖಿಸಿದರು.
ಸಚಿವ ಸಚಿವ ಎನ್.ಎಸ್.ಭೋಸರಾಜು ಮಾತನಾಡಿ, ಮುಂದಿನ ಡಿಸೆಂಬರ್ ವೇಳೆಗೆ 41,849 ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸುವ ಕೆಲಸ ಮಾಡುವ ಮೂಲಕ ಅಂತರ್ಜಲ ವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಸದ್ಯ ರಾಜ್ಯದಲ್ಲಿ 35 ಸಾವಿರಕ್ಕೂ ಅಧಿಕ ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಚ್.ಎನ್. ವ್ಯಾಲಿ, ಕೆ.ಸಿ. ವ್ಯಾಲಿ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಅಂತರ್ಜಲ ವೃದ್ಧಿಯಾಗಿದೆ. ಇದೀಗ ಪ್ರತಿ ವರ್ಷ 1018 ಕೆರೆಗಳಿಗೆ ನೀರು ತುಂಬಿಸುತ್ತಿದ್ದು, 25 ಲಕ್ಷ ಎಕರೆಗೆ ಸಣ್ಣ ನೀರಾವರಿ ಇಲಾಖೆಯಿಂದ ನೀರು ಪೂರೈಸಲಾಗುತ್ತಿದೆ. ಜೊತೆಗೆ ಎಲ್ಲ ಕೆರೆಗಳನ್ನು ಸೊಸೈಟಿಗಳ ಮೂಲಕ ಪುನರುಜ್ಜೀವನಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಅಂತರ್ಜಲ ಇಲಾಖೆ ಮೂಲಕ ರಾಜ್ಯದ 2714 ಪ್ರದೇಶಗಳಲ್ಲಿ ಪ್ರತಿ ಆರು ಗಂಟೆಗೊಮ್ಮೆ ಅಂತರ್ಜಲದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಶೇ.60 ರಷ್ಟು ಕೃಷಿ ಚಟುವಟಿಕೆ ಕೊಳವೆ ಬಾವಿ ಮೂಲಕ ನಡೆಯುತ್ತಿದೆ. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಬರಗಾಲ ಪರಿಸ್ಥಿತಿ ಎದುರಾಗುತ್ತಿದ್ದು, ಪ್ರಾಕೃತಿಕ ವಿಕೋಪದ ಸಮಸ್ಯೆ ತೀವ್ರವಾಗಿದೆ. ಮಳೆಯಾಶ್ರಿತ ಕೃಷಿಯಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಅಂತರ್ಜಲ ಬಳಕೆಯಲ್ಲಿ 10ನೇ ಸ್ಥಾನದಲ್ಲಿದೆ ಎಂದರು.
ಕಾನೂನು, ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಪಂಚ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ನೀರಿನ ಗ್ಯಾರೆಂಟಿ ಕೊಡುವುದು ಅತ್ಯಂತ ಅಗತ್ಯವಾಗಿದೆ. ಯಾರ ಕಣ್ಣಿಂದ ನೀರು ಬರುವುದಿಲ್ಲ ಅಂತಹವರು ಹಣದ ಬಗ್ಗೆ ವಿಚಾರ ಮಾಡುತ್ತಾರೆ. ಕಣ್ಣಲ್ಲಿ ನೀರು ಬಂದವರು ರೈತರ ಬಗ್ಗೆ ಆಲೋಚಿಸುತ್ತಾರೆ. ಆದರೆ ನಮ್ಮ ಸರಕಾರ ರೈತರ ಶ್ರೇಯೋಭಿವೃದ್ದಿಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಾಟರ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಜಲಸಂರಕ್ಷಣೆ ತಜ್ಞ ರಾಜೇಂದ್ರ ಸಿಂಗ್, ಸಚಿವರಾದ, ಈಶ್ವರ್ ಖಂಡ್ರೆ, ಡಾ.ಎಚ್.ಸಿ. ಮಹದೇವಪ್ಪ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಜಯ್ ಸಿಂಗ್, ರಿಝ್ವಾನ್ ಆರ್ಶದ್, ಎಂ.ವೈ ಪಾಟೀಲ್, ಎ.ಆರ್. ಕೃಷ್ಣಮೂರ್ತಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಿ.ಕೆ.ಪವಿತ್ರಾ, ಸಣ್ಣ ನೀರಾವರಿ ಇಲಾಖೆಯ ರಾಯಭಾರಿ, ನಟ ವಶಿಷ್ಟ ಸಿಂಹ ಸೇರಿದಂತೆ ಪ್ರಮುಖರಿದ್ದರು.
‘ತಾವು ಚೆಂಬಲ್ ಕಣಿವೆಯಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಿದ್ದು, ಅಲ್ಲಿ ಡಕಾಯಿತರು ಬಂದೂಕು ತೊರೆದು ಚಳವಳಿಯ ಭಾಗವಾಗಿದ್ದಾರೆ. ಕರ್ನಾಟಕದಲ್ಲಿಯೂ ವಿಕೇಂದ್ರೀಕೃತವಾಗಿ ಅಂತರ್ಜಲ ಅಭಿವೃದ್ದಿಗೆ ಒತ್ತು ನೀಡಬೇಕಾಗಿದೆ’
-ರಾಜೇಂದ್ರ ಸಿಂಗ್, ವಾಟರ್ ಮ್ಯಾನ್ ಆಫ್ ಇಂಡಿಯಾ
‘ಪ್ರಸ್ತುತ ಕುಡಿಯುವ ಮತ್ತು ಗೃಹ ಬಳಕೆಗೆ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಇದೆ. ಊರಿನಲ್ಲಿ ಒಂದು ಕೆರೆ ಇದ್ದರೆ ಆ ಊರು ಬೆಳವಣಿಗೆ ಸಾಧಿಸುತ್ತದೆ. ನೀರಿನ ಬಗ್ಗೆ ನಿಷ್ಕಾಳಜಿ ತೋರಿದ ಪರಿಣಾಮ ನಾವು ಅಭಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಮುಂಬರುವ ಪೀಳಿಗೆಗೆ ಆಸ್ತಿಯಲ್ಲ, ನೀರಿನ ಸಂರಕ್ಷಣೆಯ ಮೂಲಕ ಮಹತ್ವದ ಕೊಡುಗೆ ನೀಡಬೇಕಾಗಿದೆ’
-ವಶಿಷ್ಟ ಸಿಂಹ, ನಟ, ಸಣ್ಣ ನೀರಾವರಿ ಇಲಾಖೆಯ ರಾಯಭಾರಿ