ಶಿವಾಜಿನಗರದಲ್ಲಿ ಪಾದಚಾರಿ ರಸ್ತೆಯಲ್ಲಿನ ಅಂಗಡಿಗಳ ತೆರವಿಗೆ ಹೋದ ಅಧಿಕಾರಿಗಳ ಮೇಲೆ ಹಲ್ಲೆ; 10 ಆರೋಪಿಗಳ ಸೆರೆ

Update: 2026-07-21 22:10 IST

ಬೆಂಗಳೂರು : ಬೆಂಗಳೂರಿನ ಶಿವಾಜಿನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಹಾಗೂ ಹೆಲ್ಮೆಟ್ ಬಳಸಿ ಹಲ್ಲೆಯ ಘಟನೆ ಮಂಗಳವಾರ ವರದಿಯಾಗಿದ್ದು, ಇದು ಜಿಬಿಎ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಈ ಕೃತ್ಯವನ್ನು ‘ನಮ್ಮ ಕರ್ನಾಟಕ ಸೇನೆ’ಯ ಬಸವರಾಜ್ ಪಡುಕೋಟೆ ಹಾಗೂ ಆತನ ಬೆಂಬಲಿಗರು ಈ ಕೃತ್ಯವನ್ನು ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಘಟನೆ ಸಂಬಂಧ ಗಾಯಾಳು ಅಧಿಕಾರಿ ಮಾಧವ್ ರಾವ್ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು, 10 ಮಂದಿ ಆರೋಪಿಗಳನ್ನು ತಕ್ಷಣವೇ ಬಂಧಿಸಿದ್ದಾರೆ.

ಪ್ರಕರಣದಲ್ಲಿ ಕೊಟ್ರೇಶ್(24), ಭರತ್(24), ರಘು(28), ರಂಜನ್ ಎನ್.(19), ಮುಜಾಹಿದ್ ಮುಹಮ್ಮದ್ (39), ಪಂಪನ್(23), ರಂಗಸ್ವಾಮಿ(49), ಕಿರಣ್(34), ಬಸವರಾಜ್(28), ಪರಶುರಾಮ್(27) ಎಂಬುವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ಎಂಬಾತನ ಪತ್ತೆಗೆ ಪೊಲೀಸರು ಶೋಧ ನಡೆಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.21ರ ಮಂಗಳವಾರ ಬೆಳಗ್ಗೆ ಶಿವಾಜಿ ನಗರದಲ್ಲಿ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲು ಜಿಬಿಎ ಅಧಿಕಾರಿಗಳು ತೆರಳಿದ ವೇಳೆ, ‘ನಮ್ಮ ಕರ್ನಾಟಕ ಸೇನೆ’ ಎಂಬ ಸಂಘಟನೆ ಕಟ್ಟಿಕೊಂಡಿರುವ ಬಸವರಾಜ್ ಪಡುಕೋಟೆ ಎಂಬಾತನ ಕುಮ್ಮಕ್ಕಿನಿಂದ ಆತನ ಸಹಚರರ ಗುಂಪು, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿ ಜಿಬಿಎ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾಧವ ರಾವ್, ಸಹಾಯಕ ಇಂಜಿನಿಯರ್ ಗೌತಮ್, ಎಇಇ ಸಾವಿತ್ರಿ, ಸಹಾಯಕ ಇಂಜಿನಿಯರ್ ರುಚಿತಾ ಹಾಗೂ ಸಿದ್ದಪ್ಪ ಎಂಬುವರ ಮೇಲೆ ಹೆಲ್ಮೆಟ್‍ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಷ್ಟಕ್ಕೇ ನಿಲ್ಲದ ಆರೋಪಿಗಳು, ಜಿಬಿಎ ಮಹಿಳಾ ಅಧಿಕಾರಿಗಳ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿ ಪ್ಲಾಸ್ಟಿಕ್ ಚೇರ್ ಹಾಗೂ ಹೆಲ್ಮೆಟ್‍ಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿದ್ದ ಜೆಸಿಬಿ, ಟ್ರ್ಯಾಕ್ಟರ್ ಚಾಲಕರಿಗೂ ಸ್ಪ್ರೇ ಎರಚಿ ಹಲ್ಲೆಗೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಘಟನೆ ಕುರಿತು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದು, ‘ಅಧಿಕಾರಿಗಳ ಮೇಲೆ ದಾಳಿ ಮಾಡಿದವರ ಪೈಕಿ ಈಗಾಗಲೇ 10 ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಪೆಪ್ಪರ್ ಸ್ಪ್ರೇ, ಹೆಲ್ಮೆಟ್ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿರುವುದು ದೃಢಪಟ್ಟಿದೆ.ಪೊಲೀಸರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ಆರೋಪಿಗಳ ಹಿನ್ನೆಲೆಯ ಶೋಧ: ‘ಕೋರ್ಟ್ ಆದೇಶದಂತೆ ಜಿಬಿಎ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ನಗರದಲ್ಲಿ ಪಾದಚಾರಿ ಮಾರ್ಗಗಳ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಆರೋಪಿಗಳ ಹಿನ್ನೆಲೆಯ ಬಗ್ಗೆ ನಮ್ಮ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News