ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಸೋನಮ್ ವಾಂಗ್ಚುಕ್ ಬೆಂಬಲಿಸಿ ರಾಜ್ಯದಲ್ಲಿ ಮುಂದುವರಿದ ಧರಣಿ

Update: 2026-07-21 23:28 IST

ಬೆಂಗಳೂರು : ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಸೋನಮ್ ಬೆಂಬಲಿಸಿ ಕರ್ನಾಟಕ ಹೋರಾಟ ಸಮಿತಿ, ಕೆಆರ್ ಎಸ್ ಪಕ್ಷದ’ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಧರಣಿ ಸತ್ಯಾಗ್ರಹ, ಹೋರಾಟಗಳು ಮುಂದುವರಿದಿವೆ.

ದಿಲ್ಲಿಯಲ್ಲಿ ಸೋನಮ್ ವಾಂಗ್ಚುಕ್ ಅವರ ಹೋರಾಟವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕನ್ನು ಗೌರವಿಸಬೇಕು. ವಿದ್ಯಾರ್ಥಿಗಳ ಹಕ್ಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಆರಂಭವಾಗಿರುವ ಈ ಜನಾಂದೋಲನವನ್ನು ಇನ್ನಷ್ಟು ಬಲಪಡಿಸಲು ರಾಜ್ಯದ ಎಲ್ಲ ವಿದ್ಯಾರ್ಥಿಗಳು, ಯುವಜನತೆ, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಧರಣಿನಿರತರು ಕರೆ ನೀಡಿದರು.

ಫ್ರೀಡಂ ಪಾರ್ಕ್‍ನಲ್ಲಿನ ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಚಿತ್ರನಟ ಕಿಶೋರ್, ಈ ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳು ವ್ಯವಸ್ಥೆಯ ಸುಧಾರಣೆಗಾಗಿ ನಡೆಸುತ್ತಿರುವ ಶಾಂತಿಯುತ ಹೋರಾಟ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ. ವಿದ್ಯಾರ್ಥಿಗಳ ನ್ಯಾಯಯುತ ಧ್ವನಿಯನ್ನು ಅಡಗಿಸಲು ಬಲಪ್ರಯೋಗ ಅಥವಾ ದೌರ್ಜನ್ಯ ನಡೆಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾದದ್ದು. ವಿದ್ಯಾರ್ಥಿಗಳು ಇದ್ಯಾವುದಕ್ಕೂ ಹೆದರದೇ ಮುನ್ನುಗ್ಗಬೇಕು ಎಂದು ತಿಳಿಸಿದರು.

ದೇಶ ಪ್ರೇಮದ ಸೋಗಿನಲ್ಲಿ, ರಾಮನ ಹೆಸರಿನ ಸೋಗಿನಲ್ಲಿ ರಾಮನ ಮಂದಿರವನ್ನು ಲೂಟಿ ಮಾಡಿದ ಜನ, ಗಾಂಧಿಯನ್ನು ಕೊಂದ ಜನರಿಗೆ ಶಾಂತಿ ಆಗುವುದಿಲ್ಲ. ಅಹಿಂಸೆ ಪ್ರಬಲವಾದದ್ದು, ಅದಕ್ಕೆ ತುಂಬಾ ಧೈರ್ಯ ಬೇಕು. ಹೇಡಿಗಳು ಮಾತ್ರ ಹಿಂಸೆ ಮಾಡುತ್ತಾರೆ. 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೂ ಕೂಡ ನಾಚಿಕೆಗೆಟ್ಟ ಸರಕಾರಕ್ಕೆ ಕನಿಷ್ಠ ಮಾನವತೆ, ಸಂವೇದನಾಶೀಲತೆ ಇದ್ದರೆ ಒಂದು ಮಾತನ್ನಾದರೂ ಆಡುತ್ತಿದ್ದರು. ಒಂದು ಮಾತನ್ನಾಡದ ಸರಕಾರ, ಪ್ರಧಾನಿ, ಗೃಹ ಮಂತ್ರಿ ಯಾವ ನೈತಿಕತೆಯ ಆಧಾರದ ಮೇಲೆ ಪದವಿಯಲ್ಲಿರುತ್ತಾರೆ ಎಂದು ಪ್ರಶ್ನಿಸಿದರು.

 

ಇಂದಿನಿಂದ ರವಿ ಕೃಷ್ಣಾರೆಡ್ಡಿ ಉಪವಾಸ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಹಾಗೂ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ, ‘ವಿದ್ಯಾರ್ಥಿಗಳ ಹೋರಾಟಕ್ಕೆ ಐಕ್ಯತೆ ಸೂಚಿಸಿ ಜು.22ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ’ ಎಂದು ಕೆಆರ್‌ ಎಸ್ ಪಕ್ಷ ತಿಳಿಸಿದೆ.

ದೌರ್ಜನ್ಯ ಖಂಡಿಸಿ ಎಐಡಿಎಸ್‍ಒ ಪ್ರತಿಭಟನೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜು.20ರಂದು ಸಂಸತ್ ಭವನಕ್ಕೆ ತೆರಳುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಧ್ವನಿಯನ್ನು ದಮನ ಮಾಡಲು, ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ವಿದ್ಯಾರ್ಥಿ ಮತ್ತು ಯುವಜನರ ಮೇಲಿನ ದಿಲ್ಲಿ ಪೊಲೀಸರ ದೌರ್ಜನ್ಯವನ್ನು ಖಂಡಿಸಿ, ಎಐಡಿಎಸ್‍ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಎಐಡಿಎಸ್‍ಒನ ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಸಾಮಾನ್ಯ ಜನರ ಬದಲಿಗೆ ಕೇವಲ ಕೆಲವು ವ್ಯಕ್ತಿಗಳ ಹಿತಾಸಕ್ತಿಯನ್ನು ಕಾಯಲು ನಿಂತಾಗ, ನ್ಯಾಯದ ಬುನಾದಿಯೇ ಕುಸಿಯುತ್ತಿದೆ. ಕಳೆದ 23 ದಿನಗಳಿಂದ ದಿಲ್ಲಿಯ ಜಂತರ್ ಮಂತರ್‍ನಲ್ಲಿ ಯುವಜನತೆ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಐಎಂಎಸ್‍ಎಸ್ ಜಿಲ್ಲಾ ಕಾರ್ಯದರ್ಶಿ ನಿರ್ಮಲಾ, ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಎಐಡಿಎಸ್‍ಒ ರಾಜ್ಯ ಖಜಾಂಚಿ ಸುಭಾಷ್ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News