ಅಂಬೇಡ್ಕರ್ರನ್ನು ಪ್ರತಿಯೊಬ್ಬರು ಸ್ಮರಿಸಬೇಕು : ನ್ಯಾ.ಕೃಷ್ಣ ಎಸ್. ದೀಕ್ಷಿತ್
ನ್ಯಾ.ಕೃಷ್ಣ ಎಸ್. ದೀಕ್ಷಿತ್ (File Photo: deccanherald.com)
ಬೆಂಗಳೂರು : ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಭಾರತಕ್ಕೆ ಸ್ಪಷ್ಟ ಮಾರ್ಗ ಮತ್ತು ಗುರಿಗಳನ್ನು ಕಟ್ಟಿಕೊಟ್ಟಿದ್ದಾರೆ. ನೆರೆ ರಾಷ್ಟ್ರಗಳು ತತ್ತರಿಸಿ ಹೋಗಿದ್ದರೂ, ಭಾರತ ಇನ್ನೂ ಸದೃಡವಾಗಿ ನಿಂತಿದೆ ಎಂದರೆ ಅಂಬೇಡ್ಕರ್ ಹಾಕಿ ಕೊಟ್ಟ ಅಡಿಪಾಯದಿಂದಲೇ, ದೇಶದಲ್ಲಿರುವ ಪ್ರತಿಯೊಬ್ಬರು ಅಂಬೇಡ್ಕರ್ ರನ್ನು ಸ್ಮರಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹೇಳಿದ್ದಾರೆ.
ಶುಕ್ರವಾರ ನಗರದ ಜ್ಞಾನಭಾರತಿ ಆವರಣದಲ್ಲಿರುವ ಬೆಂಗಳೂರು ವಿವಿ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಭಾರತೀಯ ಸಂವಿಧಾನದ ಅಡಿಯಲ್ಲಿ 75 ವರ್ಷಗಳ ಆಡಳಿತ ಅಭ್ಯಾಸಗಳು ಮತ್ತು ಅನುಭವಗಳು’ ವಿಷಯದ ಕುರಿತ ಅಂತರ್ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಮೌಲ್ಯ ಮತ್ತು ಆಶಯ ಪ್ರತಿ ಭಾರತೀಯರ ರಕ್ತದಲ್ಲಿ ಬೆರೆತುಹೋಗಿದೆ. ಸಂವಿಧಾನದ ಪರಿಕಲ್ಪನೆಯಿಂದ ಈ ದೇಶ ಇಷ್ಟು ಗಟ್ಟಿಯಾಗಿ ನೆಲೆ ನಿಂತಿದೆ ಮತ್ತು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ ಎಂದರು.
ಭಾರತದ ಸಂವಿಧಾನ ಸರಳ, ಸದೃಢ, ಸಮೃದ್ಧತೆಯಿಂದ ಕೂಡಿದೆ. ವಿಶ್ವದ ಯಾವುದೇ ದೇಶದ ಸಂವಿಧಾನವೂ ಭಾರತದ ಸಂವಿಧಾನದಷ್ಟು ವಿಶಾಲತೆಯನ್ನು ಹೊಂದಿಲ್ಲ. ಭಾರತ ಸಂವಿಧಾನ ಸಾರ್ವಕಾಲಿಕವಾಗಿದ್ದು, ಪ್ರತಿ ಹಂತದಲ್ಲೂ ಸ್ಪಷ್ಟತೆ ಸಾಧಿಸಿದೆ. ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಸ್ಪಷ್ಟ ಪರಿಕಲ್ಪನೆಯನ್ನು ಸಂವಿಧಾನ ನೀಡಿದೆ. ಹಳ್ಳಿಗಾಡಿನಲ್ಲಿ, ಕುಗ್ರಾಮದಲ್ಲಿರುವವರಿಗೆ ಸಂವಿಧಾನದ ವಿಧಿಗಳು, ಕಾನೂನಿನ ಸೆಕ್ಷನ್ಗಳು ಗೊತ್ತಿರದಿದ್ದರೂ ತನಗೆ ಸಮಸ್ಯೆ ಎದುರಾದಾಗ ಸಂವಿಧಾನದ ಅಡಿಯಲ್ಲಿ ನ್ಯಾಯ ಪಡೆಯಬಹುದು ಎಂಬ ಸಾಮಾನ್ಯ ಅರಿವಿದೆ. ಈ ದೇಶದ ಪ್ರತಿಯೊಬ್ಬರಲ್ಲೂ ಸಂವಿಧಾನ ಬೆರೆತು ಹೋಗಿದೆ ಎಂದು ಅವರು ಹೇಳಿದರು.
ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಿಸಿದೆ. ಸಂವಿಧಾನದ ಅಡಿಯಲ್ಲೇ ಪ್ರತಿ ಚುನಾವಣೆಗಳು ನಡೆಯುತ್ತಿದ್ದು, ಜನರ ಆಯ್ಕೆಯಂತೆ ಸರಕಾರಗಳು ಆಡಳಿತ ನಡೆಸುತ್ತಿದೆ. ಇತರೆ ದೇಶದಂತೆ ಚುನಾವಣೆಯಲ್ಲಿ ಸೋತರು ಅಧಿಕಾರ ಬಿಟ್ಟುಕೊಡುವುದಿಲ್ಲ ಎಂಬ ಘಟನೆಗಳು ಭಾರತದಲ್ಲಿ ನಡೆದಿಲ್ಲ, ಅಧಿಕಾರ ಹಸ್ತಾಂತರದ ವೇಳೆ ದಾಳಿಗಳು ನಡೆದಿಲ್ಲ. ಇಡೀ ವಿಶ್ವ ಭಾರತವನ್ನು ಗೌರವಿಸುತ್ತಿದೆ. ಭಾರತೀಯರಿಗೆ ಮನ್ನಣೆ ಲಭಿಸಿದೆ, ಭಾರತ ಎಂದಿಗೂ ಸೋಲುವುದಿಲ್ಲ ಎಂದು ಕೃಷ್ಣ ಎಸ್.ದೀಕ್ಷಿತ್ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬೆಂವಿವಿ ಕುಲಪತಿ ಡಾ.ಜಯಕರ ಎಸ್.ಎಂ., ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಷನ್ ಆಂಡ್ ರಿಸರ್ಚ್ ಕುಲಪತಿ ಡಾ.ಆರ್.ವೆಂಕಟರಾವ್, ಡೀನ್ ಡಾ.ವಿ.ಸುದೇಶ್, ಪ್ರಾಧ್ಯಾಪಕರಾದ ಪ್ರೊ.ಡಾ.ಸತೀಶ್ ಗೌಡ ಎನ್., ಪ್ರಾಂಶುಪಾಲ ಡಾ.ಎನ್.ದಶರಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.