×
Ad

ಅನಿಲ ದರ ಏರಿಕೆ: ಕೇಂದ್ರದ ಅಸಮರ್ಥ ನಾಯಕತ್ವವೇ ಕಾರಣ: ಬಿ.ಕೆ.ಹರಿಪ್ರಸಾದ್

Update: 2026-03-10 22:38 IST

ಬೆಂಗಳೂರು : ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಿಂದ ಸಾಮಾನ್ಯ ಜನ, ರೈತರು, ಕಾರ್ಮಿಕರ ಕುಟುಂಬಗಳು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರ ನೋವನ್ನು ಅರ್ಥಮಾಡಿಕೊಳ್ಳುವ ಬದಲು ತೆರಿಗೆಗಳ ಮೂಲಕ ಅವರ ಜೇಬಿಗೆ ಕೈಹಾಕುವ ನೀತಿಯನ್ನು ಕೇಂದ್ರ ಸರಕಾರ ತಕ್ಷಣವೇ ನಿಲ್ಲಿಸಬೇಕು. ಜನರ ಬದುಕನ್ನು ದುಬಾರಿಯ ಸಂಕಷ್ಟಕ್ಕೆ ತಳ್ಳುತ್ತಿರುವುದಕ್ಕೆ ಕೇಂದ್ರದ ಅಸಮರ್ಥ ನಾಯಕತ್ವವೇ ಕಾರಣ’ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಪ್ರಧಾನಿ ಮೋದಿಯ ಸ್ವಯಂ ಘೋಷಿತ ಅಮೃತಕಾಲದಲ್ಲಿ ಕಪಲೋಕಲ್ಪಿತ ಗಟಾರ್ ಗ್ಯಾಸ್ ಕತೆಗಳು ಭಾರತವನ್ನು ಆಪತ್ತಿನ ಕಾಲಕ್ಕೆ ತಳ್ಳಿದೆ. ಸಾರ್ವಜನಿಕ ವೇದಿಕೆಯಲ್ಲಿ ವಿಜ್ಞಾನಿಗಳ ಎದುರೇ ಕಲ್ಪನೆಯನ್ನು ಮಾಡಲು ಸಾಧ್ಯವಾಗದ ಗಟಾರ್ ಗ್ಯಾಸ್ ಕತೆಗಳನ್ನು ಯಾವುದೇ ಲಜ್ಜೆ ಇಲ್ಲದೆ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೇ ಹೊರತು, ಭಾರತದ ಗ್ಯಾಸ್ ಅನಿಲ ಸಮಸ್ಯೆಯನ್ನು ಪರಿಹರಿಸಲು ಪ್ರಧಾನಿಯಿಂದ ಸಾಧ್ಯವಿಲ್ಲ ಎಂಬುದಕ್ಕೆ ವರ್ತಮಾನದಲ್ಲಿ ಆಗುತ್ತಿರುವ ಗ್ಯಾಸ್ ಅಡುಗೆ ಅನಿಲ ಬಿಕ್ಕಟ್ಟೆ ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.

‘ಮಧ್ಯಪ್ರಾಚ್ಯದಲ್ಲಿನ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ, ಇದರಿಂದ ಎಲ್‍ಪಿಜಿ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಮನೆ-ವಾಣಿಜ್ಯ ಬಳಕೆಯ ಸಿಲಿಂಡರ್‍ಗಳ ಬೆಲೆಗಳು ಹೆಚ್ಚಾಗಿದ್ದು, ಯುದ್ಧದ ವಾತಾವರಣವು ಆರ್ಥಿಕತೆಯ ಮೇಲೆ ಆತಂಕ ಮೂಡಿಸಿದೆ. ನಗರಗಳಲ್ಲಿ ಗ್ಯಾಸ್ ಸಿಲೆಂಡರ್ ಅಭಾವದಿಂದ ಹೋಟೆಲ್, ರೆಸ್ಟೋರೆಂಟ್‍ಗಳು ಬಂದ್ ಆಗುತ್ತಿದ್ದರೆ ಗ್ರಾಮೀಣ ಭಾಗದ ಜನರ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

‘ಮಧ್ಯಪ್ರಾಚ್ಯ ದೇಶಗಳ ಯುದ್ಧದ ಕುರಿತು ಪ್ರಧಾನಿಗಳ ಮೌನಕ್ಕೆ ದೇಶ ಭಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಭಾರತದ ಜನತೆಗೆ ಗ್ಯಾಸ್ ಮತ್ತು ಪೆಟ್ರೋಲ್ ಸಮಸ್ಯೆ ಬರದಂತೆ ಪರಿಹಾರ ಕಂಡುಹಿಡಿಯಿರಿ’ ಎಂದು ಭಾಷಣೆ ಬಿಗಿಯುತ್ತಿದ್ದ ಅಂದಿನ ಗುಜರಾತಿನ ಮುಖ್ಯಮಂತ್ರಿ, ಇಂದಿನ ಪ್ರಧಾನಿ ಮೋದಿ ಸರಕಾರ ಮೌನವಹಿಸಿರುವುದು ಯಾಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News