×
Ad

ಅಪ್ಪಣ್ಣ ಹೆಗ್ಡೆ ಸಹಿತ ಅಗಲಿದ ಗಣ್ಯರಿಗೆ ಸದನದಲ್ಲಿ ಶ್ರದ್ಧಾಂಜಲಿ

Update: 2026-03-09 20:43 IST

ಬೆಂಗಳೂರು : ಇತ್ತೀಚೆಗೆ ಅಗಲಿದ ಮಾಜಿ ಶಾಸಕರಾದ ಬನ್ನೂರು ಅಪ್ಪಣ್ಣ ಹೆಗ್ಡೆ, ವೈ.ಎಂ. ವೀರಣ್ಣ ಹಾಗೂ ಹಿರಿಯ ಪತ್ರಕರ್ತ ಪಿ.ರಾಮಯ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಮಾಜಿ ಶಾಸಕರಾದ ಬನ್ನೂರು ಅಪ್ಪಣ್ಣ ಹೆಗ್ಡೆ ಹಾಗೂ ವೈ.ಎಂ.ವೀರಣ್ಣ ಅವರ ರಾಜಕೀಯ ಮತ್ತು ಸಾಮಾಜಿಕ ಜನೋಪಕಾರಿ ಸೇವೆಗಳನ್ನು ಸ್ಮರಿಸಿದರು.

ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಾಜಿ ಶಾಸಕ ಬನ್ನೂರು ಅಪ್ಪಣ್ಣ ಹೆಗ್ಡೆ ಅವರು ಮೂಲತಃ ಕೃಷಿಕರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲೂ ಅವರು ಭಾಗಿಯಾಗಿದ್ದರು. ಅಧಿಕಾರ ವಿಕೇಂದ್ರೀಕರಣದಲ್ಲಿ ಕೆಲಸ ಮಾಡಿದ್ದ ಅಪ್ಪಣ್ಣ ಹೆಗ್ಡೆ ಒಬ್ಬ ಸಭ್ಯ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.

ಅದೇ ರೀತಿ ದಾವಣಗೆರೆಯ ವೈ.ಎಂ.ವೀರಣ್ಣ ಸಹ ಕೃಷಿಕರಾಗಿದ್ದರೂ ಶಿಕ್ಷಣದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದರು. ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿ, ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಬನ್ನೂರು ಅಪ್ಪಣ್ಣ ಹೆಗ್ಡೆ, ವೈ.ಎಂ.ವೀರಣ್ಣ ಅನೇಕ ಸಮಾಜಮುಖಿ ಸೇವೆಗಳನ್ನು ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ನಡೆ, ಎಲ್ಲರಿಗೂ ಮಾದರಿ. ಅವರ ಸಮಾಜಮುಖಿ ಕೆಲಸಗಳು ಶಾಶ್ವತವಾಗಿ ಉಳಿಯಲಿವೆ ಎಂದು ಸಂತಾಪ ಸಲ್ಲಿಸಿದರು. ಆ ಬಳಿಕ ಮೃತರ ಗೌರವಾರ್ಥ ಸದಸನದ ಎಲ್ಲ ಸದಸ್ಯರು ಎದ್ದುನಿಂತು ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News