'ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳು ಹರಡುತ್ತಿದ್ದಾರೆ' : ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
"ಸಿ.ಟಿ.ರವಿ ವಿರುದ್ಧ ಸುಳ್ಳು ಸುದ್ದಿ ಪ್ರಕರಣ ದಾಖಲಿಸಲು ಆಗ್ರಹ"
ಬೆಂಗಳೂರು : "ಸಿ.ಟಿ.ರವಿ ಎಂಬ ಸುಳ್ಳ, ವಿಷಜಂತು! ವಾಟ್ಸಾಪ್ ಯೂನಿವರ್ಸಿಟಿಯ ಸುಳ್ಳನ್ನೇ ಸಮಾಜಕ್ಕೂ ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ದುರುಳರಿಗೆ ತಕ್ಕ ಶಿಕ್ಷೆ ಆಗಲೇಬೇಕು" ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ʼವಾರ್ತಾಭಾರತಿʼಯಲ್ಲಿ ಪ್ರಕಟವಾದ ವಿಡಿಯೋ ಶೇರ್ ಮಾಡಿ, ಬರೆದುಕೊಂಡಿರುವ ಕಾಂಗ್ರೆಸ್, ʼಬಿಹಾರದ ರಸ್ತೆ ಅಪಘಾತದ ವಿರುದ್ಧ ಆಕ್ರೋಶಗೊಂಡ ಜನರ ವಿಡಿಯೋವನ್ನು ಸುಳ್ಳುಬುರುಕ ರವಿ ದೆಹಲಿಯ ವಿದ್ಯಾರ್ಥಿ ಪ್ರತಿಭಟನೆ ಎಂದು ಸುಳ್ಳು ಹೇಳಿದ್ದಾನೆʼ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ʼಈತನ ವಿರುದ್ಧ ಕೇವಲ ದ್ವೇಷ ಭಾಷಣ ಮಾತ್ರವಲ್ಲ, ಸುಳ್ಳು ಸುದ್ದಿ ಹರಡಿದ ಕೇಸ್ ದಾಖಲಿಸಬೇಕುʼ ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಮುಲ್ಲಾಗಳಿಗೆ ಎದೆ ಸೀಳಿದರೇ ಮೂರು ಅಕ್ಷರವಿಲ್ಲ’ ಎಂಬ ನಿಂದನಾತ್ಮಕ ಹೇಳಿಕೆ ಸಮರ್ಥಿಸಿಕೊಳ್ಳಲು ಹೋಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎಡವಟ್ಟು ಮಾಡಿಕೊಂಡಿದ್ದರು. ಎಂಟು ದಿನಗಳ ಹಿಂದೆ ಬಿಹಾರದ ರಸ್ತೆ ಅಪಘಾತದ ಬಳಿಕದ ವೀಡಿಯೋ ಒಂದನ್ನು ತೋರಿಸಿ ಅದನ್ನೇ ನೀಟ್ ಪ್ರತಿಭಟನೆ ಸಂದರ್ಭದ್ದು ಎಂಬಂತೆ ಈ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿ ಮುಜುಗರಕ್ಕೆ ಒಳಗಾಗಿದ್ದರು.