ಬೆಂಗಳೂರು : ಮತದಾರರ ಪಟ್ಟಿಯಲ್ಲಿ ತಮ್ಮ ಎಪಿಕ್ ಸಂಖ್ಯೆಯ ಮುಂದೆ 'ಸೈಯದ್ ಏಜಾಜ್ ಅಹ್ಮದ್' ಎಂಬ ಅಪರಿಚಿತ ವ್ಯಕ್ತಿ ಹೆಸರು ನಮೂದಿಸಿದ್ದಲ್ಲದೆ, ಎಸ್ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು 'ಗೈರು, ಸ್ಥಳಾಂತರ, ಮರಣ, ನಕಲಿ, ಇತರ' (ಎ.ಎಸ್.ಡಿ.ಡಿ.ಒ) ಪಟ್ಟಿಯಲ್ಲಿ 'ಶಾಶ್ವತ ಸ್ಥಳಾಂತರ' ಎಂದು ವರ್ಗಿಕರಿಸಿರುವುದನ್ನು ಆಕ್ಷೇಪಿಸಿ ಯುವತಿಯೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಜೆ.ಪಿ. ನಗರದ ಪುಟ್ಟೇನಹಳ್ಳಿ ನಿವಾಸಿ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಮತದಾರರು ಆಗಿರುವ ಎಸ್. ಮೈಥಿಲಿ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ಇಆರ್‌ಒ), ಸ್ಥಳೀಯ ಮತಗಟ್ಟೆ ಅಧಿಕಾರಿ (ಬಿಎಲ್ಒ), ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೊಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟಂಬರ್ 17ಕ್ಕೆ ಮುಂದೂಡಿತು.

ಪ್ರಕರಣವೇನು?

ಅರ್ಜಿದಾರರು 2015ರಿಂದ ಮತದಾರರ ಗುರುತಿನ ಚೀಟಿ ಹೊಂದಿದ್ದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 92ರ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ. 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅವರು ಮತದಾನವನ್ನೂ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗ 2025ರಲ್ಲಿ ಪ್ರಕಟಿಸಿದ ಮತದಾರ ಪಟ್ಟಿಯಲ್ಲಿ ಮೈಥಿಲಿ ಅವರ ಹೆಸರಿನ ಬದಲಿಗೆ ಅಪರಿಚಿತ ವ್ಯಕ್ತಿ 'ಸೈಯದ್ ಏಜಾಜ್ ಅಹ್ಮದ್' ಎಂಬ ಹೆಸರು ಬಂದಿದೆ. ಆಶ್ವರ್ಯವೆಂದರೆ ಮೈಥಿಲಿ ಅವರದ್ದೇ ಎಪಿಕ್ ಸಂಖ್ಯೆ ಇದ್ದು, ತಂದೆಯ ಹೆಸರು ಎಸ್.ಎನ್. ಶ್ರೀನಿವಾಸಮೂರ್ತಿ ಮತ್ತು ಲಿಂಗ ಹೆಣ್ಣು, ವಯಸ್ಸು ಮೈಥಿಲಿ ಅವರದ್ದೇ ಮತದಾರರ ಪಟ್ಟಿಯಲ್ಲಿ ಪ್ರಕಟವಾಗಿದೆ.

ಈ ವಿಚಾರ ಗಮನಕ್ಕೆ ಬಂದ ತಕ್ಷಣ ಮೈಥಿಲಿ ಅವರು ಅರ್ಜಿ ನಮೂನೆ 8 ಭರ್ತಿ ಮಾಡಿ ತಿದ್ದುಪಡಿ ಕೋರಿದ್ದರು. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೇರಿ ಸಂಬಂಧಪಟ್ಟ ಇತರರಿಗೆ ಮನವಿ ಸಹ ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಆಗಿಲ್ಲ. ಬದಲಿಗೆ ಮೈಥಿಲಿ ಅವರ ಹೆಸರು ಎಸ್ಐಆರ್ ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ಪಟ್ಟಿಯಲ್ಲಿ 'ಶಾಶ್ವತ ಸ್ಥಳಾಂತರ' ಎಂದು ವರ್ಗೀಕರಿಸಲಾಗಿದೆ. ಇದನ್ನು ಪ್ರಶ್ನಿಸಿ ಮೈಥಿಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor