ಬೆಂಗಳೂರು | ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಪ್ರಕರಣ : ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ | PC :grok
ಬೆಂಗಳೂರು : ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಜೆ.ಜೆ.ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವಿಜಯ್(26) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಲೆಗೈದಿದ್ದ ದೀಪು(28) ಹಾಗೂ ಅರುಣ್(27) ಎಂಬುವರನ್ನು ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ: ಪರಸ್ಪರ ವೈಷಮ್ಯ ಹೊಂದಿದ್ದ ಅರುಣ್ ಹಾಗೂ ವಿಜಯ್, ಕೆಲ ತಿಂಗಳುಗಳ ಹಿಂದೆ ಕಿತ್ತಾಡಿಕೊಂಡಿದ್ದರು. ಆ ಸಮಯದಲ್ಲಿ ಅರುಣ್ಗೆ ಚಾಕುವಿನಿಂದ ಇರಿದಿದ್ದ ವಿಜಯ್, ಹತ್ಯೆ ಯತ್ನದ ಆರೋಪದಡಿ ಜೈಲುಪಾಲಾಗಿದ್ದ. ಚಾಕುವಿನಿಂದ ಇರಿದಿದ್ದ ವಿಜಯ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅರುಣ್ ಕಾಯುತ್ತಿದ್ದ. ಜೂ.14ರ ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವಿಜಯ್ನನ್ನು ರಾಜಿ ಸಂಧಾನಕ್ಕೆಂದು ಜನತಾ ಕಾಲೋನಿ ಬಳಿ ಅರುಣ್ ಕರೆಸಿದ್ದ ಎನ್ನಲಾಗಿದೆ.
ರಾತ್ರಿ ಮಾತುಕತೆಗೆಂದು ಬಂದ ವಿಜಯ್ನನ್ನು ಅರುಣ್ ಮತ್ತು ದೀಪು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಪರಾರಿಯಾಗಿದ್ದ ಆರೋಪಿಗಳು ರಾಜರಾಜೇಶ್ವರಿ ನಗರದ ಸಮೀಪದ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜೆ.ಜೆ.ನಗರ ಠಾಣೆ ಪೊಲೀಸರು, ಆರೋಪಿಗಳು ಅಡಗಿರುವ ಸ್ಥಳದ ಮಾಹಿತಿ ದೊರೆತ ಬಳಿಕ ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದರು.
ಆದರೂ ಸಹ ಆರೋಪಿಗಳು ಮಾರಕಾಸ್ತ್ರಗಳನ್ನು ಬಳಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದರು. ಬಳಿಕ ಇಬ್ಬರ ಕಾಲಿಗೂ ಇನ್ಸ್ಪೆಕ್ಟರ್ ಕೆಂಪೇಗೌಡ ಅವರು ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟು ತಗುಲಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.