ಭೌತಿಕ ಮತ್ತು ಡಿಜಿಟಲ್ ಕಲಿಕಾ ಸಾಧನಗಳೊಂದಿಗೆ ಅರಿವು ಕೇಂದ್ರಗಳ ಸಬಲೀಕರಣ: ಪ್ರಿಯಾಂಕ್ ಖರ್ಗೆ
ಬೆಂಗಳೂರು : ಗ್ರಾಮೀಣ ಸಮುದಾಯಗಳನ್ನು ಶಿಕ್ಷಣದ ಮೂಲಕ ಸಬಲೀಕರಣಗೊಳಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಬ್ರಿಟಿಷ್ ಕೌನ್ಸಿಲ್ ನೊಂದಿಗಿನ ನಮ್ಮ ಪಾಲುದಾರಿಕೆಯೊಂದಿಗೆ, ಗ್ರಾಮೀಣ ಕರ್ನಾಟಕದ ಮಕ್ಕಳಿಗೆ ಎಲ್ಲ ಉತ್ತಮ ಗುಣಮಟ್ಟದ ಕಲಿಕೆಯ ಸಂಪನ್ಮೂಲಗಳನ್ನು ಕಲ್ಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಯುನೈಟೆಡ್ ಕಿಂಗ್ಡಮ್ ನ ಅಂತರ್ ರಾಷ್ಟ್ರೀಯ ಸಂಸ್ಥೆಯಾದ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯು ಅರಿವು ಕೇಂದ್ರಗಳ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ಇಂಗ್ಲಿಷ್ ಭಾಷಾ ಕಲಿಸುವ ಒಡಂಬಡಿಕೆ ಮಾಡಿಕೊಂಡಿರುವ ‘ಬ್ರಿಟಿಷ್ ಕೌನ್ಸಿಲ್ ಕಾರ್ನರ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳ ಕಲಿಕೆಯನ್ನು ಪ್ರೇರೇಪಿಸುವ, ಕೌಶಲ್ಯಗಳನ್ನು ಬೆಳೆಸುವ ಮತ್ತು ದೊಡ್ಡ ಅವಕಾಶಗಳಿಗೆ ಬಾಗಿಲು ತೆರೆಯುವ ನಿಟ್ಟಿನಲ್ಲಿ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ. ಭೌತಿಕ ಮತ್ತು ಡಿಜಿಟಲ್ ಕಲಿಕಾ ಸಾಧನಗಳೊಂದಿಗೆ ನಮ್ಮ ಅರಿವು ಕೇಂದ್ರಗಳನ್ನು ಸಬಲೀಕರಣಗೊಳಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಒಡಂಬಡಿಕೆಯನ್ವಯ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯಿಂದ ರಾಜ್ಯದ ಆಯ್ದ 10 ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ 500 ಮಕ್ಕಳ ಪುಸ್ತಕಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಅರಿವು ಕೇಂದ್ರಗಳಲ್ಲಿ ಭೌತಿಕವಾಗಿ ಪುಸ್ತಕ ಸಂಗ್ರಹದ ವಿಸ್ತರಣೆ ಜೊತೆಗೆ, ರಾಜ್ಯದ 5 ಸಾವಿರ ಗ್ರಾಮೀಣ ಅರಿವು ಕೇಂದ್ರಗಳಿಗೆ ಬ್ರಿಟಿಷ್ ಕೌನ್ಸಿಲ್ ಡಿಜಿಟಲ್ ಲೈಬ್ರರಿ ಪ್ರಿಮಿಯಂ ಸದಸ್ಯತ್ವವನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶವನ್ನು ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬ್ರಿಟಿಷ್ ಕೌನ್ಸಿಲ್ ನ ಡಿಜಿಟಲ್ ಲೈಬ್ರರಿ ಸಂಪನ್ಮೂಲ ಬಳಕೆಯಿಂದ ಓದುಗರು/ವೀಕ್ಷಕರು ತಮ್ಮ ಶೈಕ್ಷಣಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಲಿದೆ. ಗ್ರಾಮ ಪಂಚಾಯತಿ ಗ್ರಂಥಾಲಯಗಳ ಸಂಪೂರ್ಣ ನಿರ್ವಹಣೆಯನ್ನು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೇಗೇರಿಸುವ ಮೂಲಕ ಡಿಜಿಟಲ್ ಕಲಿಕಾ ಸಾಮಾಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. 5888 ಅರಿವು ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 5767 ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ಹೇಳಿದರು.
ಬ್ರಿಟಿಷ್ ಕೌನ್ಸಿಲ್ ಕಾರ್ನರ್ ಗಾಗಿ ಗುರುತಿಸಲಾದ 10 ಗ್ರಾ.ಪಂ. ಅರಿವು ಕೇಂದ್ರಗಳು: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕುಂದರಗಿ ಗ್ರಾ.ಪಂ. ಅರಿವು ಕೇಂದ್ರ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾ.ಪಂ. ಅರಿವು ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾ.ಪಂ. ಅರಿವು ಕೇಂದ್ರ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಟದ ಹೊಸಹಳ್ಳಿ ಗ್ರಾ.ಪಂ. ಅರಿವು ಕೇಂದ್ರ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾ.ಪಂ. ಅರಿವು ಕೇಂದ್ರ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾ.ಪಂ. ಅರಿವು ಕೇಂದ್ರ, ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾ.ಪಂ. ಅರಿವು ಕೇಂದ್ರ, ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾ.ಪಂ. ಅರಿವು ಕೇಂದ್ರ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾ.ಪಂ. ಅರಿವು ಕೇಂದ್ರ ಹಾಗೂ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ತೊರವಿ ಗ್ರಾ.ಪಂ. ಅರಿವು ಕೇಂದ್ರವನ್ನು ಆಯ್ಕೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಮತ್ತು ಅಂಜುಮ್ ಪರ್ವೇಝ್, ಪಂಚಾಯತ್ ರಾಜ್ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯ ಜನಕ ಪುಷ್ಪನಾಥನ್, ಮೇಘಾ ಕಕ್ಕರ್, ಅನಿತಾ ಶಿವಕುಮಾರ್ ಉಪಸ್ಥಿತರಿದ್ದರು.