‘ಗ್ಯಾರಂಟಿ’ ಕುರಿತು ಶ್ವೇತಪತ್ರ ಹೊರಡಿಸಲಿ : ಆರ್.ಅಶೋಕ್

Update: 2026-08-15 23:35 IST

ಬೆಂಗಳೂರು : ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‍ಮಾಲ್ ನಡೆಯುತ್ತಿದ್ದು, ಸರಕಾರದ ಬಳಿ ಇರುವ ಯಾವುದೇ ಅಂಕಿ-ಅಂಶಗಳು ಹೊಂದಾಣಿಕೆಯಾಗುತ್ತಿಲ್ಲ. ಆದುದರಿಂದ ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶ್ವೇತಪತ್ರ ಹೊರಡಿಸಿ ಸದನದಲ್ಲಿ ಮಾಹಿತಿ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಶನಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಶಕ್ತಿ ಯೋಜನೆಯ ಕುರಿತು ಮಾತನಾಡಿದ್ದಾರೆ. ಯೋಜನೆಯಡಿ ರಾಜ್ಯದ 3.5ಕೋಟಿ ಮಹಿಳೆಯರು 796ಕೋಟಿ ಉಚಿತ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ 3ವರ್ಷಗಳಲ್ಲಿ 14,875ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಆದರೆ, ಸರಕಾರಕ್ಕೆ 3 ವರ್ಷ ಪೂರ್ಣಗೊಂಡ ಸಮಯದಲ್ಲಿ ಮಹಿಳೆಯರು 753.7ಕೋಟಿ ಉಚಿತ ಪ್ರಯಾಣ ಮಾಡಿದ್ದು, 19,771ಕೋಟಿ ರೂ.ಮೌಲ್ಯದ ಉಚಿತ ಟಿಕೆಟ್‍ಗಳನ್ನು ನೀಡಲಾಗಿದೆ ಎಂದು ಸಿಎಂ ಅಧಿಕೃತ ಎಕ್ಸ್ ನಿಂದ ಪೋಸ್ಟ್ (2026ರ ಜೂನ್ 11) ಮಾಡಲಾಗಿತ್ತು. ಇದಕ್ಕೂ ಮುನ್ನ 2026ರ ಮೇ 25ರಂದು ಮಾಡಿದ್ದ ಎಕ್ಸ್ ಪೋಸ್ಟ್  ನಲ್ಲಿ 726 ಕೋಟಿ ಉಚಿತ ಪ್ರಯಾಣಗಳಾಗಿದ್ದು, 18,943ಕೋಟಿ ರೂ. ವ್ಯಯಿಸಲಾದ ಅನುದಾನ ಎಂದು ಉಲ್ಲೇಖಿಸಲಾಗಿದೆ. ಇದನ್ನು ತಾಳೆ ಹಾಕಿದರೆ 5ರಿಂದ 6 ಸಾವಿರ ಕೋಟಿ ರೂ.ಗಳ ವ್ಯತ್ಯಾಸ ಬರುತ್ತದೆ. ಆಗ ಹೆಚ್ಚಿದ್ದ ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ ಎಂದು ಸ್ಪಷ್ಟನೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳ 5 ಸಾವಿರ ಕೋಟಿ ರೂ. ಹಣವನ್ನು ಇನ್ನೂ ನೀಡಿಲ್ಲ. ಇದನ್ನು ನೀಡಲಾಗಿದೆಯೇ ಎಂಬ ಬಗ್ಗೆ ಸರಕಾರದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ಆದುದರಿಂದ ಗ್ಯಾರಂಟಿಯ ಎಲ್ಲ ಯೋಜನೆಗಳ ಅಂಕಿ-ಅಂಶಗಳ ಬಗ್ಗೆ ಸರಕಾರ ನಿಖರ ಮಾಹಿತಿಯನ್ನು ಸದನಕ್ಕೆ ನೀಡಬೇಕು. ಇಲ್ಲವಾದರೆ ಇದು ಜನರಲ್ಲಿ ಇನ್ನಷ್ಟು ಗೊಂದಲ ಉಂಟಮಾಡುತ್ತದೆ ಎಂದು ಅವರು ಕೋರಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News