ಬೆಳಗಾವಿ | ದಲಿತ ಯುವಕರ ಮೇಲೆ ಹಲ್ಲೆ; ಆರೋಪ
ದೂರು, ಪ್ರತಿದೂರು ದಾಖಲು
ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಲ್ಲೆ ಮಾಡಿದ್ದಾರೆ ಎನ್ನಲಾದ ಲಿಂಗಾಯತ ಸಮುದಾಯದವರು, ಹಲ್ಲೆಗೊಳಗಾದ ದಲಿತ ಸಮುದಾಯಕ್ಕೆ ಸೇರಿದವರು ದೂರು, ಪ್ರತಿದೂರು ದಾಖಲಿಸಿದ್ದಾರೆ.
ಈರಣ್ಣ ವಿಠ್ಠಲ ನಾಯ್ಕರ (18) ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ (19) ಹಲ್ಲೆಗೊಳಗಾದವರು. ಈ ಪೈಕಿ ಓರ್ವರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ. ಆಗಸ್ಟ್ 5ರಂದು ಹಲ್ಲೆ ನಡೆದಿದ್ದು, ಆ.11ರಂದು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಲಿಂಗಾಯತ ಸಮುದಾಯದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್ ದಾನಪ್ಪ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಂಗಪ್ಪ ನಿಂಗಪ್ಪ ಪಾಕನಟ್ಟಿ ಅವರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಿಸಲಾಗಿದೆ.
‘ಆರೋಪಿಗಳು ಹಾಗೂ ನಮ್ಮ ಜಮೀನು ಅಕ್ಕಪಕ್ಕದಲ್ಲಿವೆ. ಜಮೀನಿಗೆ ಹೋಗಲು ದಾರಿ ಏಕೆ ಬಿಡುವುದಿಲ್ಲ ಎಂದು ಜಗಳ ತೆಗೆದ ಆರೋಪಿಗಳು ಯುವಕನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಕುಡಗೋಲು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಕೀಳು ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಎನ್ನಲಾಗುತ್ತಿರುವ ವಿಠ್ಠಲ ನಾಯ್ಕರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ದೂರು ದಾಖಲಿಸಿರುವ ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬರು, ‘ಈ ಘಟನೆ ಹೊಲಕ್ಕೆ ಸಂಬಂಧಿಸಿಲ್ಲ. ಇಬ್ಬರೂ ಯುವಕರು ನನ್ನ 14 ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಬಾಲಕಿ ಶಾಲೆಗೆ ಹೋಗುವಾಗ–ಬರುವಾಗ ಬೈಕ್ ನಲ್ಲಿ ಬೆನ್ನಟ್ಟಿ ಬರುತ್ತಿದ್ದರು. ಪ್ರೀತಿಸುವಂತೆ ಕಾಡಿಸುತ್ತಿದ್ದರು. ಮೊಬೈಲ್ ನಂಬರ್ ಕೊಡು, ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರು ಕೊಟ್ಟಿದ್ದಾರೆ.
ಓರ್ವ ಯುವಕನ್ನು ಮರಕ್ಕೆ ಕಟ್ಟಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸದ್ಯ ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು, ಪ್ರತಿದೂರು ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.