ಬೆಳಗಾವಿ : ಶಾರ್ಟ್ ಸರ್ಕ್ಯೂಟ್ನಿಂದ 20 ಎಕರೆ ಕಬ್ಬು ಬೆಂಕಿಗಾಹುತಿ
Update: 2025-11-06 09:26 IST
ಬೆಳಗಾವಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಆರು ಮಂದಿ ರೈತರಿಗೆ ಸೇರಿದ 20 ಎಕರೆಯಷ್ಟು ಕಬ್ಬು ಸುಟ್ಟು ಹೋದ ಘಟನೆ ಕಾಗವಾಡ ತಾಲ್ಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಬುಧವಾರ ನಡೆದಿದೆ.
ಭರತೇಶ ಖಂಡೇರಾಜುರೆ ಅವರ 5 ಎಕರೆ, ಚಂದ್ರಕಾಂತ ಅಕಿವಾಟೆ, ಧರೆಪ್ಪ ಕುಸನಾಳೆ ಅವರ ತಲಾ 3 ಎಕರೆ, ಮಲ್ಲು ಕುರುಬರ, ಅಣ್ಣು ಕುರಬರ, ಮಹಾದೇವ ಕುರುಬರ ಅವರಿಗೆ ಸೇರಿದ 9 ಎಕರೆ ಬೆಂಕಿಗೆ ಆಹುತಿಯಾಗಿದೆ. ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ರೈತರು ಅಂದಾಜಿಸಿದ್ದಾರೆ.
ಉರಿಬಿಸಿಲು ಇದ್ದ ಕಾರಣ, ಕಬ್ಬಿನ ರವದಿ ಒಣಗಿತ್ತು. ಹೊಲದಲ್ಲಿ ನೇತಾಡುವ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಕಾಗವಾಡದಿಂದ ಅಗ್ನಿ ಶಾಮಕ ದಳದ ವಾಹನ ಬರುವಷ್ಟರಲ್ಲಿ ಕಬ್ಬು ಸುಟ್ಟು ಹೋಯಿತು ಎಂದು ರೈತರು ದೂರಿನಲ್ಲಿ ತಿಳಿಸಿದ್ದಾರೆ.