×
Ad

ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ ಅಂಗೀಕಾರ | ಕರಾರು ಉಲ್ಲಂಘಿಸಿದವರಿಗೆ ಹೆಚ್ಚಿನ ದಂಡ, ಜೈಲು ಶಿಕ್ಷೆಯಿಂದ ವಿನಾಯಿತಿ : ಕೃಷ್ಣಭೈರೇಗೌಡ

Update: 2025-12-16 16:45 IST

ಬೆಳಗಾವಿ : 2025ನೆ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕದ ಮೇಲೆ ದೀರ್ಘ ಚರ್ಚೆ ನಡೆಸಿದ ಬಳಿಕ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಶಾಸನ ರಚನೆ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು 2025ನೆ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಕೋರಿದರು.

ಈ ಬಗ್ಗೆ ವಿವರಣೆ ನೀಡಿದ ಅವರು, ಇದೊಂದು ಸರಳ ವಿಧೇಯಕ. ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ ಎಂದರು.

ಮೂಲ ವಿಧೇಯಕದಲ್ಲಿ ಉಲ್ಲಂಘನೆಯಾದರೆ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆ ತಪ್ಪಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಸಚಿವರು ಉತ್ತರಿಸಿ, ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೆ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನನ್ನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಗಣನೀಯವಾಗಿ ತಡೆಯಬಹುದು ಎಂದು ಅಭಿಪ್ರಾಯಪಟ್ಟರು. ಅನಂತರ ಈ ವಿಧೇಯಕ ಧ್ವನಿಮತ ಮೂಲಕ ಅಂಗೀಕಾರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News