×
Ad

ಮುಖ್ಯಮಂತ್ರಿಗೆ ಕಪ್ಪು ಬಟ್ಟೆ ಪ್ರದರ್ಶನ | ಇಂತಹ ಘಟನೆ ಮರುಕಳಿಸಿದರೆ ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ : ಲಕ್ಷ್ಮೀ ಹೆಬ್ಬಾಳ್ಕರ್

Update: 2025-04-29 19:20 IST
  • ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಅತಿರೇಖವಾಗಿ ವರ್ತಿಸಿದರು. ಇಂತಹ ಘಟನೆಗಳು ಮರುಕಳಿಸಿದರೆ, ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ನಮ್ಮ ಕಾರ್ಯಕರ್ತರಿಗೂ ರೋಷಾವೇಷ, ಪಕ್ಷದ ಬಗ್ಗೆ ಅಭಿಮಾನ, ಕಾಳಜಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ 25 ಸಾವಿರ ಜನರ ವಿಭಾಗ ಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಷಣ ಮಾಡುವಾಗ, ಬಿಜೆಪಿ ಕಾರ್ಯಕರ್ತರು ಮಧ್ಯದಲ್ಲಿ ಬಂದು ಕಪ್ಪುಪಟ್ಟಿ ತೋರಿಸುವುದು ಎಷ್ಟರ ಮಟ್ಟಿಗೆ ಸರಿ. ಮುಂದಿನ ದಿನಗಳಲ್ಲಿ ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದರೆ, ನಮ್ಮ ಕಾರ್ಯಕರ್ತರನ್ನು ಅವರು ಸುಮ್ಮನೇ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಘಟನೆ ಆದರೆ ಇದಕ್ಕೆ ನೀವೇ (ಮಾಧ್ಯಮದವರು) ಸಾಕ್ಷಿ ಆಗುತ್ತೀರಿ. ಇಂಥ ಘಟನೆಗಳು ಮರುಕಳಿಸಿದರೆ, ನಮ್ಮ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ರಾಜ್ಯಾದ್ಯಂತ ಸಿದ್ದರಾಮಯ್ಯನವರ ಅಭಿಮಾನಿಗಳು ಇದ್ದಾರೆ. ನಮ್ಮ ಮುಖ್ಯಮಂತ್ರಿ ಮಾತನಾಡುವಾಗ ಕಪ್ಪು ಬಟ್ಟೆ ಹಾರಿಸಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರಿಗೆ ಶೋಭೆ ತರುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬಿಜೆಪಿಯವರು ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದ ಒಳಗೂ, ಹೊರಗೂ ಬೈದರೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆಕೊಟ್ಟು ನಾವು ಶಾಂತಿಯಿಂದ ವರ್ತನೆ ಮಾಡುತ್ತಿದ್ದೇವೆ. ಆದರೆ, ಬಿಜೆಪಿಯವರು ನಿನ್ನೆ ನಡೆದುಕೊಂಡು ರೀತಿ ಒಪ್ಪುವಂತದ್ದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಆಕಸ್ಮಿಕ ಘಟನೆ: ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಲು ಮುಂದಾಗಿದ್ದು ಆ ಕ್ಷಣದಲ್ಲಿ ಆ ರೀತಿ ಆಗಿರಬಹುದು. ಆ ಸಂದರ್ಭದಲ್ಲಿ ಆದ ಆಕಸ್ಮಿಕ ಘಟನೆ ಇದಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಹಿರಿಯರು, ಅವರು ಅಧಿಕಾರಿಗಳಿಗೆ ಗೌರವ ನೀಡುವ ವಿಷಯದಲ್ಲಿ ತಮ್ಮ ಚೌಕಟ್ಟನ್ನು ಎಂದೂ ಮೀರಿದವರಲ್ಲ. ಆ ಸಂದರ್ಭದಲ್ಲಿ ಅಂಥ ಘಟನೆ ನಡೆಯಬಾರದಿತ್ತು. ಸಿದ್ದರಾಮಯ್ಯಗೆ ಇನ್ನೊಂದು ಹೆಸರೇ ಹಿಂದುಳಿದ ವರ್ಗ, ತುಳಿತಕ್ಕೊಳಗಾದವರ ಧ್ವನಿ ಎನ್ನುತ್ತೇವೆ. ಸಿದ್ದರಾಮಯ್ಯನವರ ದೊಡ್ಡ ಗುಣವನ್ನು ಎಲ್ಲರೂ ಹಾಡಿಹೊಗಳುತ್ತಾರೆ. ಆದರೆ, ಆ ಒಂದು ಘಟನೆ ನಡೆಯಬಾರದಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮೇ ತಿಂಗಳಲ್ಲಿ ಮೂರು ತಿಂಗಳ ಗೃಹಲಕ್ಷ್ಮಿ ಹಣ: ಬಾಕಿ ಉಳಿದಿರುವ ಮೂರು ತಿಂಗಳ (ಜನವರಿ, ಫೆಬ್ರವರಿ, ಮಾರ್ಚ್) ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಮೂರು ತಿಂಗಳ ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, ಒಂದು ವಾರ ಒಂದು ತಿಂಗಳ ಹಣ, ಮತ್ತೊಂದು ವಾರ ಮತ್ತೊಂದು ತಿಂಗಳ ಹಣವನ್ನು ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News